Sunday, 1 December 2019

ಹಾಣಾದಿ ಕುರಿತು ಸಂದೀಪ್ ಈಶಾನ್ಯ ಅವರ ಅಭಿಪ್ರಾಯ

ಪ್ರಯಾಣವನ್ನು ಆರಂಭಿಸುವ ಮೊದಲೇ ತಲುಪುವ ಗಮ್ಯತೆಯ ಕುರಿತು ನಿಶ್ಚಿತವಾಗಿರುವುದು ಬಹಳ ಮುಖ್ಯ. ಈ ಕ್ರಮವನ್ನು ಸಾಹಿತ್ಯದಲ್ಲೂ ಬಹುತೇಕ ಒಪ್ಪಬಹುದು. ಕೆಲವೊಮ್ಮೆ ಕತೆ, ಕವಿತೆ ಸೇರಿದಂತೆ ಉಳಿದ ಎಲ್ಲಾ ಪ್ರಕಾರಗಳೂ ಲೇಖಕನನ್ನು ಮೀರಿ ಬೆಳೆಯುವ ಸಾಮರ್ಥ್ಯವನ್ನು ತೋರುತ್ತವೆ. ಇದಾಗಿಯೂ ಬಹುವಾಗಿ ಕಾಡುವ ವಸ್ತುವೊಂದು ತನ್ನ ಆರಂಭದ ಗುಟ್ಟನ್ನು ತೋರಗೊಡದಿದ್ದರೂ ಗಮ್ಯತೆಯನ್ನು ತನ್ನ ಆಳದಲ್ಲಿ ಈ ಮೊದಲೇ ಉದುಗಿಸಿಟ್ಟುಕೊಂಡಿರುತ್ತದೆ ಎನ್ನುವುದು ನಿರ್ವಿವಾದ.

ಸದ್ಯ ಈ ಮಾತನ್ನು ಗೆಳೆಯರಾದ ಕಪಿಲ ಹುಮನಬಾದೆ ಅವರ ರಚನೆಯ "ಹಾಣಾದಿ" ಕಾದಂಬರಿಗೂ ಅನ್ವಯಿಸಿ ನೋಡಬಹುದು. ಸಿಗರೇಟನ್ನು ಕೊಡವುತ್ತಲೇ ನೆನಪುಗಳ ಸುರುಳಿಯನ್ನು ಪದರುಗಳಲ್ಲಿ ಓದುಗನ ಎದುರು ತೆರೆದಿಡುತ್ತಾ ಸಾಗುವ ಈ ಕಾದಂಬರಿ ಕೇವಲ ಹತ್ತು ಪುಟಗಳನ್ನು ಕ್ರಮಿಸುವಷ್ಟರಲ್ಲಿ ಮತ್ತೊಂದು ಸ್ತರಕ್ಕೆ ಬಂದು ನಿಲ್ಲುತ್ತದೆ. ಯಾವುದೇ ಅನುಕರಣೆಯ ಬೇನ್ನರದೇ ಸತ್ವವನ್ನು ಹೊಂದಿರುವ ತನ್ನ ಬೇರಿನ ಮೂಲಕವೇ ಆಕ್ರಮಿಸಿಕೊಳ್ಳಲು ಹಾತೊರೆಯುವ ಕಪಿಲ ಅವರು ನುರಿತ ಬರಹಗಾರರಂತೆ ಕಾಣುತ್ತಾರೆ. ಹೆಸರಿಲ್ಲದ ಹುಡುಗಿ, ಕತೆಯ ಮೂಲವೇ ಆಗಿರುವ ಬಾದಾಮಿ ಗಿಡ, ಯಾವುದೋ ಗುಹೆಯಲ್ಲಿ ವಾಸ ಮಾಡುವ ಗುಬ್ಬಿ ಆಯಿಯ ಮೂಲಕ ಓದುಗನನ್ನು ಎದುರು ಕೂರಿಸಿಕೊಂಡು ನಿರ್ಲಿಪ್ತವಾಗಿ ಕಥೆಯನ್ನು ಹೇಳುತ್ತಾ ಸಾಗುವ ಕಪಿಲ ಅವರು ಪ್ರತಿ ಹಂತದಲ್ಲೂ ಚಕಿತಗೊಳಿಸುತ್ತಾರೆ. 

ಇಟಲಿ ಲೇಖಕ ಉಂಬರ್ಟೋ ಎಕೋ ಬರೆದ "ದಿ ಐಲ್ಯಾಂಡ್ ಆಫ್ ದಿ ಡೇ ಬಿಫೋರ್" ಕಾದಂಬರಿಯನ್ನು ರಚನೆಯ ದೃಷ್ಟಿಯಿಂದ ದೀರ್ಘವಾಗಿ ನೆನಪಿಸುವ ಕಪಿಲ ಅವರ ಈ ಕಾದಂಬರಿ ಓದುಗನ ಒಳಗೆ ಬೆಳೆಯುವ ಶಕ್ತ ಬರವಣಿಗೆಯಿಂದ ಕೂಡಿದೆ. ಗಟ್ಟಿಯಾದ ಕತೆಯ ಹೊರತಾಗಿ ಯಾವುದೇ ಕಾರಣಕ್ಕೂ ನಾನು ಕಥನವನ್ನು ರಮ್ಯ ರೂಪಕಗಳ ಸಹಾಯದಿಂದ ಮಾತ್ರ ಚಂದಗೊಳಿಸುವುದಿಲ್ಲ ಎನ್ನುವ ಧೋರಣೆಯನ್ನು ತೋರಿದ್ದರೂ ಅಷ್ಟೇ ಪ್ರಬುದ್ಧ ರೂಪಕಗಳನ್ನು ಈ ಕಾದಂಬರಿ ಹೊಂದಿದೆ. ಗುಬ್ಬಿ ಆಯಿಯ ಸತ್ವಭರಿತ ಮಾತುಗಳು, ಹೊಲದ ಹಾದಿ, ಅಪ್ಪನ ನೆನಪುಗಳು ಎಲ್ಲವನ್ನೂ ಒಮ್ಮೆಲ್ಲೇ ಎದೆಗಿಳಿಸಿಸುವ ಈ ಪುಸ್ತಕ "ಮ್ಯಾಜಿಕಲ್ ರಿಯಲಿಸಂ" ಗುಣವನ್ನು ಹೊಂದಿದೆ ಎನ್ನುವ ನಿರ್ಧಾರಕ್ಕೆ ಬರುವ ಹೊತ್ತಿಗೆ ಕತೆ ವಾಸ್ತವಕ್ಕೆ ಬಂದು ನಿಂತಿರುತ್ತದೆ. ಆ ಮೂಲಕ ಓದುಗನ ಎಣಿಕೆಯನ್ನು ತಲೆಕೆಳಗು ಮಾಡಿಬಿಡುತ್ತದೆ. 

ಕಪಿಲ ಓರ್ವ ಲೇಖಕರಾಗಿ ಯಾವುದಕ್ಕೆ ಹೆಚ್ಚು ತುಡಿಯುತ್ತಾರೆ ಎನ್ನುವುದು ಇದೇ ಕಾದಂಬರಿಯಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಅವರ ವಿಚಾರಗಳು ಇನ್ನಷ್ಟು ಗಟ್ಟಿಯಾಗಲಿ. ಕಡೆಯದಾಗಿ, ಮಹಾನಗರಗಳ ಗದ್ದಲದ ನಡುವೆ ಕಳೆದುಹೋಗುತ್ತಿರುವ ಶಕ್ತ ಬರಹಗಾರರನ್ನು ನೋಡುತ್ತಾ ನೊಂದುಕೊಳ್ಳುವ ಸಮಯದಲ್ಲೇ ಕಪಿಲ ಅವರ ಬರವಣಿಗೆ ಓದಲು ಸಿಕ್ಕಿದ್ದು ಮತ್ತೊಂದು ಭರವಸೆ ಎನಿಸುತ್ತಿದೆ. ಕಪಿಲ ಅವರೊಳಗಿ‌ನ ಲೇಖಕ ನಿದ್ರಿಸದಿರಲಿ.

- ಸಂದೀಪ್ ಈಶಾನ್ಯ

https://www.instamojo.com/kavyamane580/--cdfc6/ 

ಈ ಲಿಂಕ್ ಬಳಸಿ. ಹಾಣಾದಿ ಕಾವ್ಯ ಮನೆ ಪ್ರಕಾಶನದಿಂದ ತೆಗೆದುಕೊಳ್ಳಬಹುದು‌‌

ಹಾಣಾದಿ ಕುರಿತು ರಾಜೇಶ್ ಶಿಂಧೆಯವರ ವಿಮರ್ಶೆ ಲೇಖನ

ಮೂರು ತಾಸಿನ ಸಿನಿಮಾದಂತೆ ಗೋಚರವಾಗುವ "ಹಾಣಾದಿ" ಇದನ್ನ ಒಂದೆ ಗುಕ್ಕಿನಲ್ಲಿ ಹೈರಾಣಾಗದೆ ನಡೆದು ಬಂದೆ..

ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಪ್ರಯೋಗಗಳ ಜೊತೆಗೆ ಯುವ ಬರಹಗಾರರ ದಂಡು ಸೃಜನಶೀಲರಾಗಿ ಸೃಜನಾತ್ಮಕ ಬರವಣಿಗೆಯ ಮೂಲಕ‌ ತಮ್ಮ‌ ಛಾಪನ್ನೂ ಮೂಡಿಸುವಲ್ಲಿ ತನ್ನ ಗಟ್ಟಿಯಾದ ನಿಷ್ಣಾತ ಕಾವ್ಯಭಿವ್ಯಕ್ತಿಯಿಂದ ಗುರುತಿಸಿಕೊಂಡಿದ್ದಾರೆ ಕೆಲವರ ಬರಹಗಳು ಮೋಡಿ ಮಾಡಿ.ಓದುಗಪ್ರೀಯರು ನಿರುತ್ತರರಾಗಿದ್ದಾರೆ ಅಂತವರ ಸಾಲಲ್ಲಿ ನಿಲ್ಲುವ 
ನಮ್ಮ ಬೀದರ ಜಿಲ್ಲೆಯ 
ಭರವಸೆಯ ಯುವ ಬರಹಗಾರರಾದ ಕಪೀಲ್ ಪಿ ಹುಮನಬಾದೆ ಅವರ "ಹಾಣಾದಿ" ಕಾದಂಬರಿಯ ಕುರಿತು ಒಂದು ಅವಲೋಕನ ತಿಳಿದಂತೆ ನನ್ನದೆ ಶೈಲಿಯಲ್ಲಿ..!

ಈ ಹಾಣಾದಿ ಕಾದಂಬರಿಯಲ್ಲಿ ಇಡಿ ಕತೆಯನ್ನ ಒಂದು ವೃದ್ಧ ಆತ್ಮವೆ ಆವರಿಸಿಕೊಂಡು ವಿವರಿಸಿಕೊಂಡು ಕತೆ ದಣಿಯದ ವೃದ್ಧ ಆತ್ಮದಂತೆ ಸಾಗುತ್ತದೆ.ಇಲ್ಲಿ ಬರುವ ಹಲವು ಪಾತ್ರಗಳು ಇಡಿ ಕಾದಂಬರಿಯುದ್ದಕ್ಕು ಆಧಾರ ಹಾಗೂ ಸಾಕ್ಷಿ ಒದಗಿಸುತ್ತಾ ಸಾಗುತ್ತದೆ.ಹಾಣಾದಿ ಎಂದರೆ ನಮ್ಮ ಬೀದರ ಭಾಷೆಯಲ್ಲಿ "ಜೋಡೆತ್ತಿನ ಗಾಡಿ ಹೋಗುವ ದಾರಿ ಅಥವಾ ನಮ್ಮಲ್ಲಿ ಹೊಲಗಳಿಗೆ ಹೋಗುವಾಗ ಅಕ್ಕಪಕ್ಕದ ಹಚ್ಚ ಹಸಿರಿನ ಎದೆ ಸೀಳಿಕೊಂಡು ಆದ ಕಾಲ್ದಾರಿ ಸಹ ಆಗುತ್ತದೆ" ಕತೆಯು ಸಹ ವಿಶಿಷ್ಟ ಮತ್ತು ಕೌತುಕದ ತಿರುವು ಪಡೆಯುತ್ತಾ ಅಲ್ಲಲ್ಲಿ ಆತಂಕಕ್ಕೆ ತಳ್ಳಿ ಮತ್ತೆ ಮೇಲೆತ್ತಿ ನಿರೂಪಕನ ಗೊಂದಲದ ಗೂಡಿಗೆ ಮತ್ತಷ್ಟು ಮಗದಷ್ಟು ಕಸ ಕಡ್ಡಿ ತುಂಬಿಸುತ್ತಾ ಒಳಗೊಳಗೆ ಅದು ಮಜಬೂತ್ ಆಗುತ್ತಾ ಕೊನೆಯ ಘಳಿಗೆಯಲ್ಲಿ ಎಲ್ಲವೂ ತಿಳಿದು ಒಮ್ಮೆ ಬೆಚ್ಚಿ ಬೀಳುವ ಮೂಲಕ ಹಾಗೂ ಹಲವು ಪ್ರಶ್ನೆಗಳು ಹುಟ್ಟುಹಾಕುವ ಮೂಲಕ ಮುಕ್ತಾಯವಾಗುತ್ತದೆ.

ಕಾದಂಬರಿ ಎಂದರೆ ಒಂದು ನೈಜತೆ ಅಥವಾ ಕಲ್ಪನೆಯಲ್ಲಿ ಪರಿಪಕ್ವವಾಗಿ ಮೂಡಿ ಬರುವ ಒಂದು ಕಥನ.ಎಲ್ಲ ಕತೆಗಳಲ್ಲಿ ಪಾತ್ರಗಳು ವಸ್ತುಗಳು ಸ್ಥಳಗಳು ಇವ್ವುಗಳನ್ನಿಟ್ಟುಕೊಂಡು ನಡೆಯುತ್ತಿರುವ/ನಡೆದ ಘಟನೆಗಳ ಸ್ಥೂಲವಾದ ವಿವರಣಾತ್ಮಕ ರಚನೆಯೆ ಕಾದಂಬರಿಯಾದರೆ, ಹಾಣಾದಿಯ ಕತೆ ಪ್ರಾರಂಭವಾಗೋದು ನಿರೂಪಕನ ಪಟ್ಟಣದ ದಿನನಿತ್ಯದ ಅಮೂಲಾಗ್ರ ಸಮಸ್ಯೆಗಳಿಂದ ಸಣ್ಣ ಸಮಧಾನದ ಸೆಳೆವು ಅನ್ನುವಂತಹ  ರಜೆ ದಿನಗಳಿಂದ ಹಲವು ವರ್ಷಗಳಿಂದ ಊರಿನ ಮುಖವೇ ನೋಡದ ನಿರೂಪಕ ಊರಿನ ಬಸ್ ಹತ್ತಿ ಅದರ ವೇಗಕ್ಕೆ ವಿರುದ್ಧವಾಗಿ ತನ್ನ ಬಾಲ್ಯದ ನೆನಪುಗಳತ್ತ ಟೈಮ್ ಮಷೀನ್ ಹತ್ತಿ ಹೋಗಿ ಅಲ್ಲಿನ ಹಲವಾರು ಅನೂಹ್ಯ ಅತೀತ ನೆನಪುಗಳ ಬುತ್ತಿ ಬಿಚ್ಚಿಕೊಂಡಾಗ ಓದುಗನಿಗೆ ಒಂದು ಕ್ಷಣ ತನ್ನದೆ ಈ ನೆನಪುಗಳು ಅನ್ನುವಷ್ಟು ಮೊದಲಿಗೆ ಕತೆ ಆಪ್ತವಾಗದೆ ಇರಲಾರದು ಅನ್ನೊದೊಂದು ಸಂಭ್ರಮವೇ ಸರಿ.ಪಟ್ಟಣದ ಬದುಕಿಗೆ ಸಣ್ಣದೊಂದು ವಿದಾಯ ಹೇಳಿ ತನ್ನ ಹುಟ್ಟೂರಿನತ್ತ ಬಸ್ ಓಡುವಾಗ ನೆನಪುಗಳು ಸಾಲು ಸಾಲಾಗಿ ಎದೆಗವಚಿಕೊಂಡು ಹಳ್ಳಿಗೆ ಬಂದಾಗ ಸ್ವಾಗತಕ್ಕೆ ಇದ್ದ ಅಜೀವ ಆಕೃತಿಗಳಿಂದಲೆ ಕತೆಯ ಹೊಸ ರೂಪಕ್ಕೆ ತಿರುಗುತ್ತದೆ.ಅಲ್ಲಿಂದ ಶುರುವಾದ ನಿರೂಪಕ ಕತೆ ನೇರವಾಗಿ ಊರೊಳಗೆ ಪ್ರವೇಶಿಸಿದಾಗ ಆತನಿಗೆ ಅದೆಷ್ಟೋ ವರ್ಷಗಳ ಕೆಳಗೆ ಗಲ್ಲಿ ಗಲ್ಲಿ ಸುತ್ತಿ ಆಡಿ ಬೆಳೆದು ನೆನಪುಗಳ ಮೂಟೆಯನ್ನ ಹೋರಿಸಿದ ಊರು ಅಕ್ಷರಶಃ ಯಾರು ಯಾರಿಲ್ಲದಂತೆ ಬಾಯಾರಿದಾಗ ನೀರಿಲ್ಲದ ಬಾವಿಯಲ್ಲಿ ಕಸ ಕಡ್ಡಿ ಹೊಲಸು ತುಂಬಿ ನಾರುವಾಗ ಅಲ್ಲಿ ಒಬ್ಬ ಅಜ್ಜಿ ದುತ್ತೆಂದು ಕಾಣಿಸಿಕೊಂಡು ನಿರೂಪಕನ ಹಣೆಯ ಮೇಲಿನ ಗೆರೆಗಳೆಲ್ಲಾ ತಿಳಿಯಾಗುವಂತೆ ಮಾಡಿ ಬಳಲಿ ಬೆಂಡಾಗಿ ಬಾಯಾರಿದವನಿಗೆ ಅಮೃತ ತುಂಬಿದ ಕೊಡ ಸಿಕ್ಕಂತೆ ಅನುಭವಾಗುವ ಸಮಯಕ್ಕೆ ಕತೆ ಮೂಲ ರೂಪ ಪಡೆಯೊದು ಇಲ್ಲೆ ಕಾರಣ ಅಜ್ಜಿಯ ಪ್ರವೇಶವೇ ಈ ಕತೆಯಲ್ಲಿ ತಿರುವು ನೀಡುತ್ತದೆ‌.ಈ ಕಾದಂಬರಿಯ ಕತೆಯ ಆಧಾರವೇ ಈ ಅಜ್ಜಿ ಹೇಳುವ ಕತೆಯೊಳಗಿನ ಕತೆಗಳ ಚಿತ್ರಣ ಮತ್ತು ನಿರೂಪಕನಿಗೆ ಕೌತುಕದ ಮಿಶ್ರಣ ಮನದೊಳಗೆ ಶುರುವಾದರೆ ಓದುಗನಿಗೆ ಎಡೆಬಿಡದೆ ಓದಿಸಿಕೊಳ್ಳುವ ಹೂರಣ.ಅಸಲಿಗೆ ಬಹುತೇಕ ಕತೆಗಾರರು ಪಾತ್ರದಿಂದ ಹೊರಗುಳಿದು ಕತೆ ಕಟ್ಟುತ್ತಾರೆ ಆದರೆ ಇಲ್ಲಿ ಕತೆಗಾರನೆ ಕತೆಯ ನಿರೂಪಕನ ಪಾತ್ರವನ್ನ ಅತ್ಯಂತ ಸಮರ್ಪಕವಾಗಿ ತುಂಬಿ ಭೇಷ್ ಅನಿಸಿಕೊಂಡಿದ್ದಾರೆ.ಅಜ್ಜಿಯ ಗುಟ್ಟು ಬಿಟ್ಟುಕೊಡದ ಒಗಟಿನಂತ ಮಾತುಗಳು ಅತ್ಯಂತ ಕ್ಲುಪ್ತವಾಗಿ ಕತೆಯ ಕೊನೆತನಕ ನಿಭಾಯಿಸಿದ ಹೌದೌದು ಪರಿ ಮೆಚ್ಚಬೇಕು.

ಇದೊಂದು ಹಳ್ಳಿಯಲ್ಲಿ ನಡೆದ ಕಥಾಸರಣಿಗಳ ಗುಚ್ಚವನ್ನ ಇಲ್ಲಿ ಹಿಡಿದಿಟ್ಟಂತೆ ಮನನವಾಗುತ್ತದೆ ನಿರೂಪಕನ ತಂದೆಯ ಬಾದಾಮಿ ಗಿಡದ ಮೇಲಿನ ವ್ಯಾಮೋಹ ಪ್ರೇಮ ಎಲ್ಲದಕ್ಕು ಮಿಗಿಲಾಗಿ ಆ ಬಾದಾಮಿ ಗಿಡದ ಸುತ್ತ ನಡೆಯುವ ಕಾಕತಾಳಿಯವಾದರು ಸತ್ಯವೆನಿಸುವಂತೆ ಊರಲ್ಲಿ ನಡೆಯುವ ಪ್ರತಿ ಘಟನೆ ಈ ಬಾದಾಮಿ ಗಿಡದ ಬುಡಕ್ಕೆ ಬಂದು ಕಗ್ಗಂಟಿನ ಬೇರಾಗಿ ನಿರೂಪಕನ ತಂದೆಯ ನೋವಿನ ಖಾತೆಗೆ ದಿನವೊಂದು ಜಮೆಯಾಗುವ ನಿದರ್ಶನವಾಗುವ ಎಲ್ಲ ಘಟನೆಗಳು ಅತ್ಯಂತ ಸೂಕ್ಷ್ಮವಾಗಿ ಹಿಡಿದಿಟ್ಟು ಕತೆಗೆ ರೋಚಕತೆಯ ಲೇಪ ಮೆತ್ತಿದ ಬರಹಗಾರರ ಜಾಣ್ಮೆ ಮೆಚ್ಚುವಂತದ್ದು.ನಿರೂಪಕನ ಪ್ರತಿ ಪ್ರಶ್ನೆಯಿಂದ ಹೊಸ ಆತಂತ ಕೌತುಕ ಹುಟ್ಟುವ ಮಾತುಗಳಾಡುವ ಗುಬ್ಬಿ ಅಜ್ಜಿ (ಆಯಿ) "ಹಾಳೂರಿಗುಳಿದವನೇ ಗೌಡ" ಅನ್ನೋ ರೀತಿಯಲ್ಲಿ ಇಡಿ ಊರೆ ಪಾಳು ಬಿದ್ದು ಸ್ಮಶಾನವಾಗಿದ್ದ (ಆ ಊರೆ ಕತೆಗೆ ಎಲ್ಲ ರೀತಿಯ ವಿಷಯ ವಸ್ತು ಪಾತ್ರಗಳು ಒದಗಿಸುತ್ತದೆ.) ಅನ್ನುವಂತ ಸ್ಮಶಾನ ತದ್ರೂಪಿ ಊರಿಗೆ ಆ ಗುಬ್ಬಿ ಆಯಿನೆ ವಾರಸುದಾರಳು ಅನ್ನುವಂತೆ ನಿರೂಪಕನ ಯೋಗಕ್ಷೇಮ ವಿಚಾರಿಸುತ್ತಾ 
ಹಕ್ಕಿ ಕಾಲಿಡದ ಊರಲ್ಲಿ ನಿರೂಪಕನ‌ ಹಸಿದ ಹೊಟ್ಟೆಗೆ ಬಿಸಿ ಬಿಸಿಯಾದ ರೊಟ್ಟಿ ಹಾಗೂ ಮಲಗಕ್ಕೆ ಪರವಾಗಿಲ್ಲ ಅನ್ನುವಂತ ವ್ಯವಸ್ಥೆ ಕಲ್ಪಸಿಕೊಟ್ಟು ಅವನನ್ನ ಚೆನ್ನಾಗಿ ನೋಡಿಕೊಳ್ಳುತ್ತಾ ಇರ್ತಾಳೆ ಅದೆಲ್ಲಿಂದ ಒಂದು ಸಣ್ಣ ಹುಡುಗಿ ಈ ಮುದುಕಿ ಹತ್ರ ಬರುತ್ತೆ ಅದು ನಿರೂಪಕನ ತಂದೆಯ ಆಳು ಕಂಠಿಯ ಮೊಮ್ಮಗಳು ಅಜ್ಜ ಸತ್ತಾಗಿಂದ ಈ ಗುಬ್ಬಿ ಆಯಿ ಹತ್ರಾನೆ ಇರುತ್ತಾಳೆ ಹೀಗೆ ಸಾಗುವ ಕತೆಯಲ್ಲಿ ಮಧ್ಯದಲ್ಲಿ ಬರುವ ಕೆಲವು ಸಣ್ಣ ಪಾತ್ರಗಳು ಕೊನೆಯಲ್ಲಿ ಏನಾದವು ಅವ್ವು ನಿಜಕ್ಕು ಬದುಕಿದ್ದವಾ ಅನ್ನೋದು ಪ್ರಶ್ನೆ..?.ಉತ್ತರ ಕೊನೆಯಲ್ಲಿದೆ.ಹೀಗೆ ಸಾಗುತ್ತಾ ಕತೆಗಾರನ ಪ್ರತಿ ಕದಲಿಕೆಗೆ ಹೊಸ ಆಯಾಮವೆಂಬಂತಹ ಮಾತುಗಳು ಕತೆಯ ರೋಚಕತೆಗೆ ಹಿಡಿದ ಕೈಗನ್ನಡಿ.ಇಲ್ಲಿ ಕತೆಗಾರ ಅನ್ವೇಷಕ ಹಾಗೂ ನಡೆಯುವ ಪ್ರತಿ ಸನ್ನಿವೇಶಕ್ಕೆ ಮೂಕ ಕಿವುಡ ಸಾಕ್ಷಿಯಂತೆ ಉಳಿಯುವ ಅನಿವಾರ್ಯತೆ ಸೃಷ್ಟಿ ಆಗುತ್ತದೆ ಅಜ್ಜಿಯ ನಡೆ ನುಡಿಯನ್ನ ಕೇಳದೆ ಬೇರೆ ದಾರಿಯಿಲ್ಲ ಕಾರಣ ಹಲವೂ ವರ್ಷಗಳ ನಂತರ ಊರಿಗೆ ಬಂದಿದ್ದಿನಿ ಊರು ಮನೆಯಲ್ಲಿ ಥೇಟ್ ಸ್ಮಶಾನದ ಅನುಭವ.ತನ್ನ ತಂದೆಯ ಅನುಪಸ್ಥಿತಿಯ ಯಾಕಿದೆ.? ಅಪ್ಪ ಎಲ್ಲಿದ್ದಾನೆ..? ಅನ್ನೋ ಹಲವಾರು ಪ್ರಶ್ನೆಗಳೆ ಕತೆ ಸಾಗೋದಕ್ಕೆ ಕಾರಣವಾಗ್ತವೆ.ಗುಬ್ಬಿ ಆಯಿಯಲ್ಲಿ ತನ್ನ ತಂದೆಯ ಬಗ್ಗೆ ಕೇಳಿದಾಗೊಮ್ಮೆ ಅವಳು ಏನೇನೋ ಹೇಳಿ ಒಂದು ಪೂರ್ವ ನಿರ್ಧಾರಿತ ಮೂಹುರ್ತದಂತ ಸಮಯಕ್ಕಾಗಿ ಕಾಯ್ಕೊಂಡು ಬರೋತನಕದ ಕತೆಯ ನಿರೂಪಣ ಶೈಲಿ ಚೆನ್ನಾಗಿದೆ.ಇಲ್ಲಿ ನಿರೂಪಕನ ತಂದೆ ನೆಟ್ಟ ಬಾದಾಮಿ ಗಿಡದಿಂದಲೇ ಊರಿನವರಿಗೆ ಒಂದಲ್ಲ ಒಂದು ಆಘಾತಕಾರಿ ಸಮಸ್ಯೆಗಳು ಆಗುತ್ತಿದ್ದೆ ಎಂಬ ಪ್ರತಿಯೊಂದು ಘಟನೆಯು ಎಷ್ಟು ಸತ್ಯವನಿಸುವಷ್ಟು ನಡೆದುಕೊಳ್ಳೊ ಜನರು ಅದು ಕಾಕತಾಳಿಯೋ ಸತ್ಯವೋ ತರ್ಕಿಸದೆ ಹಾಗೆ ಸತ್ಯ ಯಾವುದು ಅನ್ನೋದು ಅರಿಕೆಗೆ ಬರದೆ ಎಲ್ಲವೂ ನಿರೂಪಕನ ತಂದೆಯನ್ನ ಗುರಿಯಾಗಿಸಿಕೊಂಡು ಆ ಬಾದಾಮಿ ಗಿಡಕ್ಕೆ ನೇರ ದೋಷಣೆ ಮಾಡ್ತಾರೆ ಅದು ನೆಟ್ಟಾಗಿಂದ ತಮಗಾಗುತ್ತಿರುವ ಸಮಸ್ಯೆ ಈ ಗಿಡದಿಂದ ಇದನ್ನ ಕಡಿದು ಹಾಕಬೇಕು ಅನ್ನೋ ಹಲವು ಸರಿಯ ತೀವ್ರ ಪ್ರಯತ್ನಗಳು ನಡೆದರು ಅದು ಕತೆಗಾರನ ತಂದೆಯ ಧೃಡ ಸಂಕಲ್ಪದ ಎದುರು ಮಗುಚಿ ಬಿದ್ದು ಹೋಗುತ್ತವೆ.ಇಲ್ಲಿ ಮೂಲ ಕಾರಣ ಏನು ಅಂತ ತಿಳಿಯದ ಜನರ ಪ್ರತಿಗಾಮಿತನ ಎಷ್ಟು ಅನ್ನೋದು ಸ್ಪಷ್ಟವಾಗಿ ತಿಳಿದು ಬರುತ್ತದೆ‌‌.ಗುಬ್ಬಿ ಆಯಿ ಈ ಕತೆಗಳು ನಿರೂಪಕನಿಗೆ ವಿವರಿಸುತ್ತಾ ಮಧ್ಯ ಕಂಠಿ (ಇವನು ನಿರೂಪಕನ‌ ತಂದೆಯ ಆಳು) ಅನ್ನೋ ದೈತ್ಯ ದೇಹಿಯೊಬ್ಬನ ಕತೆಯೊಂದು ಪ್ರವೇಶ ಮಾಡಿ ಈ ಹಾಣಾದಿಯ ಮೊಳಕಾಲುದ್ದ ಕೆಸರಿನ ಖೆಡ್ಡಾದಲ್ಲಿ ಬಿದ್ದು ಸತ್ತು ಹೋದ ಕತೆ ಸೆಲೆಯೊಂದು ಹಾದು ಹೋಗುತ್ತದೆ ಇಲ್ಲಿ ಹಾಣದಿ ಅನ್ನೋದು ಎಂತಹ ಅಪಾಯಕಾರಿ ಅನ್ನೋದು ಊಹಿಸಬಹುದು.

ಆನಂತರ ಊರ ಹಾಣಾದಿಗೆ ಕತೆ ಬರುತ್ತದೆ ಗುಬ್ಬಿ ಆಯಿ ಮತ್ತು ನಿರೂಪಕ ತನ್ನ ತಂದೆ ಎಲ್ಲಿ ಅಂತ ಮುಂದಿಡುವ ಪ್ರಶ್ನೆಗೆ ಅಜ್ಜಿ ಖಂದಿಲು ಹಿಡಿದು ಹಾಣಾದಿಯಲ್ಲಿ ನಡೆಸ್ಕೊಂಡು ಹೋಗುವ ಮೂಲಕ ಒಂದೊಂದೆ ಕತೆಯನ್ನ ಮತ್ತು ಜನರು ಬಾದಾಮಿ ಗಿಡದ ಬೇರುಗಳಿಗಿಂತ ಜಾಸ್ತಿ ಕಟ್ಟಿರುವ ಕತೆಗಳು ಹೇಳುತ್ತಾ ಸಾಗುತ್ತಾಳೆ.ಆ ಕಗ್ಗತ್ತಲ ರಾತ್ರಿಯ ಪ್ರತಿ ಹೆಜ್ಜೆಯು ಹೊಸ ಕತೆ ಪ್ರತಿಯೊಂದು ಶಬ್ದವು ಭಯ ಮತ್ತು ಸತ್ಯ ಅರಗಿಸಿಕೊಳ್ಳುವ ಎಚ್ಚರಿಕೆಗಳೆರಡು ನೀಡುತ್ತಾ ಸಾಗುತ್ತದೆ ಕತೆ ಹಾಣಾದಿ ಅಂತ ಕಾದಂಬರಿಗೆ ಹೆಸರು ಇಲ್ಲಿಂದಲೆ ಬಂದದ್ದು.

ಕಂಠಿಯ ಸಾವಿನ ನಂತರ ನಿರೂಪಕನ ತಂದೆ ಒಂಟಿಯಾಗಿದ್ದರಿಂದ ಗುಡ್ಡದ ಮೇಲಿರೋ ಗುಬ್ಬಿ ಆಯಿಯನ್ನ ತನ್ನ ಮನೆಗೆ ತಂದು ಇಟ್ಕೊಂಡು ಹೊತ್ತನ್ನಕ್ಕೆ ಆಸರೆ ಕೊಟ್ಟು ತನಗೊಂದಷ್ಟು ಬೇಯಿಸಿ ಹಾಕಲು ಇರಲಿ ಅನ್ನೋ ಕಾರಣಕ್ಕೆ.ಈ ಬಾದಾಮಿ ಗಿಡದ ಕೆಳಗೆ ಒಂದಿನ ಈ ಅಜ್ಜಿ‌ ನಿಂತರೂ ಸಹ ಅದನ್ನ ದೆವ್ವ ಅಂತ ಜನರು ನೋಡಿದವರು ಆಡಿಕೊಳ್ಳಲು ಶುರು ಮಾಡ್ತಾರೆ ಆದರೆ ಇದ್ಯಾವುದೂ ಬಾದಾಮಿ ಗಿಡದಿಂದ ಆಗುತ್ತಿಲ್ಲ ಅನ್ನೋದು ಗುಬ್ಬಿ ಆಯಿಗೆ ಮತ್ತು ಇವನ ತಂದೆಗೆ ಚೆನ್ನಾಗಿ ಗೊತ್ತಿರುತ್ತೆ ಆದರೆ ಮಡಕೆ ಬಾಯಿ ಮುಚ್ಚಬಹುದು ಜನರ ಬಾಯಿ ಮುಚ್ಚೋದು ಕಷ್ಟ. ಮಗನಿಗಿಂತ ಹೆಚ್ಚಾಗಿ ಪ್ರೀತಿಯಿಂದ ಬೆಳಸಿದ ಬಾದಾಮಿ ಗಿಡ ಎಷ್ಟೆಕ್ಕಾ ಆತಂಕಗಳು ಸೃಷ್ಟಿ ಮಾಡುತ್ತಿದೆ ಅನ್ನೋದು ಸುಳ್ಳು ಅದನ್ನ ಜನರಿಗೆ ಹೇಗೆ ತಿಳಿಸಿದರು ಜನರ ಕ್ಯಾರೆ ಅನ್ನಲ್ಲ ಯಾಕೆಂದರೆ ಅಲ್ಲಿನ ಒಬ್ಬ ಸ್ವಾಮಿ ಕಟ್ಟಿದ ಕತೆಗೆ ಹೂಂ ಅಂತ ತಲೆಯಾಡೀಸೋ ಜನ ಅವನು ಊರಿಗೆ ಊರೆ ಬಾದಾಮಿ ಗಿಡಕೆ ಗತಿ ಕಾಣಿಸಿ ಎಂದು ಹಾಗೂ ಊರಲ್ಲಿ ಆಗುತ್ತಿರುವ ಎಲ್ಲದಕ್ಕು ನೇರ ಬಾದಾಮಿ ಗಿಡ ಕಾರಣ ಅನ್ನೋ ಸುದ್ದಿಯನ್ನ ಮತ್ತು ಭಯವನ್ನ ಜನರ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿ ಕೊನೆಗೂ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಗಿಡ ಕಡೆಸುವಲ್ಲಿ ಸಫಲವಾಗ್ತಾನೆ ಆ ಗಿಡ ಕಡಿದಾರೆಂಬೂದು ತಿಳಿದಾಕ್ಷಣದಿಂದ ಅದರ ಮಾಲಿಕ ಮಾನಸಿಕ ಸ್ಥಿಮಿತ 
ಕಳೆದುಕೊಂಡು ಹಗಲು ರಾತ್ರಿ ಎನ್ನದೆ ಹುಚ್ಚನಂತೆ ಹಲಬುತ್ತಾ ಕಂಡ ಕಂಡವರಿಗೆ ಬೈಯುತ್ತಾ ಕೊನೆಗೊಂದು ರಾತ್ರಿ ಗುಬ್ಬಿ ಆಯಿ ಮಲಗಿದ್ದಾಗ ಗಿಡದ ಮಾಲಿಕ್ ಹೊರಗಿಂದ ಚಿಲಕ ಹಾಕಿ ಆ ಬಾದಾಮಿ ಗಿಡದ ಕಟ್ಟಿಗೆಗಳಿಗೆ ಬೆಂಕಿ ಹಾಕಿ ನೇರವಾಗಿ ಅಗ್ನಿಗಾಹುತಿ ಆಗ್ತಾನೆ (ಒಂದು ಗಿಡಕ್ಕು ಇಷ್ಟೊಂದು ಪ್ರೀತಿಯಿಂದ ಸಾಕಿ ಅದರೊಟ್ಟಿಗೆ ಮಗನ/ಳ ಹಾಗೆ ಭಾವನಾತ್ಮಕ ಸಂಬಂಧ ಬೆಳೆಯುತ್ತೆ ಅನ್ನೋದು ಮೊದಲು ಓದಿದ್ದು)
ಇದು ಹಾಣಾದಿಯುದ್ದಕ್ಕು ನಿರೂಪಕನ ತಂದೆಯ ದುರಂತ ಅಂತ್ಯದ ಬಗ್ಗೆ ವಿವರಿಸುತ್ತಾ ಸಾಗುವ ಅಜ್ಜಿ ಈ ಹುಡುಗನಿಗೆ ತಾನೊಂದು ಆತ್ಮ ಅನ್ನೋದು ತಿಳಿಯೋದಕ್ಕೆ ಅವಕಾಶ ಕೊಡದಂತೆ ನಡೆಸಿಕೊಂಡು ಬಂದು ಕೊನೆಗೆ ಅವನ ತಂದೆಯನ್ನ ಹೂತು ಹಾಕಿದ ಹೊಲದ ಹತ್ರ ಬಿಟ್ಟು ತಾನೂ ಹೊಟ್ಟೆಪಾಡಿಗೆ ಮಾಡುವ ಕೆಲಸ ಕಾಯಿಗಳನ್ನ ಹಸನು ಮಾಡಿಸುವ ಹೆಣ್ಣು ಮಗಳತ್ರ ಹೋಗಿ ಬರುವುದಾಗಿ ಹೇಳಿ ಹೋದಾಗ ಭಯದಲ್ಲೆ ತನ್ನ ತಂದೆಯನ್ನ ಹೂತ ಜಾಗಕ್ಕೆ ಬಂದು ಒಂದು ಋಣಾತ್ಮಕ ಭಾವಕ್ಕೆ ವಶವಾಗಿ ಸ್ತಬ್ದವಾಗಿ ನಿಂತಾಗ ಬೆಳಗಿನ ಮೂರನೆಯ ಜಾವದ ಆರಂಭ ಪಕ್ಕದ ಗಿಡಗಂಟಿಗಳಿರೋ ಜಾಗದಲ್ಲಿ ಒಂದು ಸಣ್ಣ ಬೆಂಕಿಯ ಕಿಡಿ ಕಾಣಿಸಿ ಅದರೊಟ್ಟಿಗೆ ಮುಂದಕ್ಕೆ ಹೆಜ್ಜೆ ಹಾಕುತ್ತಾ ಬರುವ ಆಕೃತಿಯನ್ನ ಬೆಚ್ಚಿ ನೋಡುವ ನಿರೂಪಕ ಅವನು ಬಂದು ಮಾತಾಡಿಸಿ ತಾನು ನಿಮ್ಮ ತಂದೆಯವರ ಆಳು ಕಂಠಿಯ ಮಗ ಎಂದಾಗ ಕತೆಗಾರ ಇಲ್ಲಿತನ ನಡೆದ ಘಟನೆ ವಿವರಿಸಿದಾಗ ಕಂಠಿಯ ಮಗ ಬೆಚ್ಚಿ ಬೆವತು ಹೋಗುವಂತಹ ಸತ್ಯವನ್ನ ಹೇಳ್ತಾನೆ ಅಸಲಿಗೆ ಈ  ಗುಬ್ಬಿ ಅಜ್ಜಿ ಯಾರು ಆಕೆ ಸತ್ತು ಎಷ್ಟು ವರ್ಷ ಆಯ್ತು ಆ ಚಿಕ್ಕ ಹುಡುಗಿ ಯಾರು ಆಕೆ ಬದುಕಿದ್ದಾಳ ಅನ್ನೋದೆಲ್ಲಾ ಗೊತ್ತಾಗಕ್ಕೆ ಮುರಾನೆಯ ಚುಮು ಚುಮು ಚಳಿಯ ಜಾವ ಸಾಕ್ಷಿಯಾಗಿರುತ್ತದೆ.
ಅಸಲಿಗೆ ಗುಬ್ಬಿ ಆಯಿ‌ ಒಂದು ಆತ್ಮ ಆ ಮನೆಯಲ್ಲಿ ಇರೋ ಸಣ್ಣ ಹುಡುಗಿ ಸಹ ಆತ್ಮ ಇಲ್ಲಿ ಒಂಥರಾ ನಿರೂಪಕನಿಗೆ ಭ್ರಾಮಕ‌ ಲೋಕದಲ್ಲಿ ಅಲೆಸುತ್ತಾ ಅವನ ತಂದೆಯ ಬದುಕಿನ ಕಡು ಸತ್ಯ ಅರುಹಿ ಮರೆಯಾದ ಅಜ್ಜಿ.ಎಲ್ಲವೂ ಆತ್ಮಕತೆ ಇನ್ನಿತರೆ ಕತೆಗಳಾದರೆ ಇಲ್ಲಿ ಆತ್ಮಗಳೆ ಕತೆಗೆ ಕಥಾವಸ್ತು ಮತ್ತು ಕತೆಯ ಮುಖ್ಯ ಪಾತ್ರಗಳು ಹಾಗೂ ಕತೆಯೊಳಗಿನ ಕತೆಗಳನ್ನ ಸಮಯೋಚಿತವಾಗಿ ವಿವರಿಸುತ್ತಾ ಸಾಗುವ ನಿರೂಪಕ.

ಓದಿದಾಗ ಕೆಲವೊಂದು ಅಂಶಗಳು ಹೀಗೂ ಇರುತ್ತೆ ಅನ್ನುವಂತೆ ಮನಗಂಡು ಬಿಟ್ಟಿದ್ದಿನಿ.

೦೧)ಜನರು ಒಬ್ಬ ಮನುಷ್ಯನಿಗೆ ಮತ್ತು ಗಿಡ ಮರ ಪಕ್ಷಿ ಪ್ರಾಣಿಗಳೊಂದಿಗೆ ಇರುವ ಗಾಢ ಮುಗ್ಧ ಪ್ರೀತಿಯನ್ನ ಅರ್ಥ ಮಾಡಿಕೊಳ್ಳದೆ ಭ್ರಮನಿರಶನಕ್ಕೆ ಒಳಗಾಗಿ ಹೃದಯಹೀನರಂತೆ ವರ್ತಿಸೋದು.

೦೨)ಒಂದು ಮರದೊಂದಿಗೆ ಅಥವಾ ಇತರೆ ಸಜೀವ ನಿರ್ಜೀವ ವಸ್ತುಗಳು ಮನುಷ್ಯನ ಭಾವನಾತ್ಮಕ ವಿಚಾರಗಳಿಗೆ ಎಷ್ಟು ಹತ್ತಿರವಾಗಿರುತ್ತವೆ ಹಾಗೆ ಅದನ್ನ ದೂರದಾಗ ಅದರಿಂದ ಆತನ ಮೇಲೆ ಯಾವ ತರದ ಪರಿಣಾಮ ಬೀರುತ್ತೆ ಅನ್ನೋದು ಕಾದಂಬರಿ ಸಾಕ್ಷಿಕರಿಸುತ್ತದೆ.

೦೩)ಗಿಡದಿಂದ ಹೀಗೂ ಆಗುತ್ತಾ ಅನ್ನೋದು ತರ್ಕಿಸದೆ ಮೂಲ ಕಾರಣಕ್ಕೆ ಹುಡಕಾಡದೆ ಕಾಕತಾಳೀಯ ಎಂಬಂತೆ ಎಲ್ಲವೂ ನಡೆದಂತೆ ನಡೆದದ್ದು ಒಪ್ಪಿಕೊಂಡು ಒಬ್ಬರ ಮೇಲೆ ಹೀಗೆಲ್ಲಾ ಜನ ಮುಗಿಬಿದ್ದು ಹಿಂಸೆ ಕೊಡ್ತಾರೆ ಅನ್ನೋದು ಸಹ ಇಲ್ಲಿದೆ.

೦೪)ಬಾದಾಮಿ ಗಿಡಕ್ಕೆ ನೇತು ಬಿದ್ದ ಕಾಕತಾಳೀಯ ಕತೆಗಳಿಗೆ ಒಂದಿನ ಗಿಡವೆ ಹೇಗೆ ಬಲಿಯಾಯ್ತೋ ಗಿಡದ ಮಾಲಿಕನ ಶಾಪಕ್ಕೋ ಅಥವಾ ಇನ್ಯಾವುದೋ ಕಾಕತಾಳೀಯ ಕತೆಗೆ ಊರ ಜನರ ಮನೆ ಆಸ್ತಿಪಾಸ್ತಿ ನೆಮ್ಮದಿ ಇದ್ದದ್ದು ಎಲ್ಲಾ ಬಲಿಯಾಯ್ತು.


ಒಬ್ಬ ಬರಹಗಾರ ಹೇಗೆ ಕಾವ್ಯಲೋಕಕ್ಕೆ ಅಂಬೆಗಾಲಿಟ್ಟು ಬಂದು ಒಂದು ಇಲ್ಲಿ ಗಮ್ಯ ಕಂಡುಕೊಂಡು ತನ್ನ ಗಟ್ಟಿಯಾದ ಬರಹಗಳ ಮೂಲಕ‌ ಜನಮಾನಸದಲ್ಲಿ ಖಾಯಂ ಆಗಿ ನಿಲ್ಲುತ್ತಾನೋ ಹಾಗೇಯೇ ಈ ಕಾದಂಬರಿಯಲ್ಲಿ ಬಾಲ್ಯದ ನೆನಪುಗಳು ಮೆಲಕು ಹಾಕುವ ಮೂಲಕ ಶುರುವಾದ ಕತೆ ತನ್ನೂರಿಗೆ ಬಂದು ನಡೆಯೋದು ಕಲಿತು ಯಾವುದೆ ಗೊಂದಲ ಆಭಾಸ ಎನಿಸಿದರೆ ಓದಿಸಿಕೊಂಡು ಸಾಗುತ್ತದೆ.ಕತೆಗಾರ ಹೊಸಬರಾದರು ಕತೆ ಪೂರ್ಣತೆ ಕಂಡುಕೊಂಡಿದೆ ನಮ್ಮ ಭಾಗದ ಭಾಷೆಯ ಸಮಯೋಚಿತ ಸಮರ್ಪಕವಾದ ಬಳಕೆ ಮತ್ತು ಅಚ್ಚುಕಟ್ಟಾದ ಪಾತ್ರಗಳನ್ನ ಕತೆಯುದ್ದಕ್ಕು ನಿಭಾಯಿಸುತ್ತಾ ಅಲ್ಲಲಿ ಕೆಲವು ಉಪಮೇಗಳು ಹಿರಿಯರ ಮಾತಿನಂತೆ ನೆನಪಲ್ಲಿ ಉಳಿತವೆ.ಮೂಲಕ ಗದ್ಯಕೃತ್ರುಗಳ ಸಾಲಿಗೆ ಸೇರುವು ಯಾವುದೆ ಅನುಮಾನವಿಲ್ಲ.ಅಭಿನಂದನೆಗಳು ಕಪೀಲ್ ಬ್ರದರ್ ಇನ್ನು ಹೆಚ್ಚಿನ ಕಾದಂಬರಿಗಳು ನಿಮ್ಮಿಂದ ಹೊರಬಂದು ನಾಡಿನ ಜನರ ಮನದಲ್ಲಿ ಅಚ್ಚಳಿಯದೆ ಉಳಿಯಲಿ ಎಂದು ಶುಭಹಾರೈಸುತ್ತೆನೆ.ಹಾಗೇಯೆ ಇದರಲ್ಲಿ ಆದ ಕೆಲವೂ ಸಣ್ಣ ತಪ್ಪುಗಳು ಸಹ ಫೋನಲ್ಲಿ ಚರ್ಚೆ ಮಾಡಲಾಗಿದೆ ನಿಮ್ಮೊಟ್ಟಿಗೆ..

ತಿಳಿದ ರೀತಿ ಬರೆಯುವ ಪ್ರಯತ್ನ ಮಾಡಿದ್ದಿನಿ ಧನ್ಯವಾದಗಳು "ಹಾಣದಿ" ಕೈಗೆತ್ತಿ ಒಂದೆ ಗುಕ್ಕಿಗೆ ಓದಿಸಿದಕ್ಕೆ
✍🏻✍🏻✍🏻✍🏻
*ರಾಜೇಶ ಶಿಂಧೆ*

Saturday, 25 August 2018

ಪಿ.ಕೆ ನವಲಗುಂದರವರ ಕವನ

ತಾತ್ಕಾಲಿಕ ಪ್ರೇಯಸಿ

ಹೈಸ್ಕೂಲ್ ಡೇ ನಿಂದ ಕಾಲೇಜಿಗೆ ಶಿಪ್ಟಾದ
ಕಲರ್ ಪುಲ್ ಡ್ರೆಸ್ಗಳೊಂದಿಗೆ
ಕನಸುಗಳನ್ನು ಮಾರಲಾಗುತ್ತದೆ ?
ಕೂದಲು ತೊಯ್ದು ತೊಟ್ಟಿಕ್ಕುವ ಇಬ್ಬನಿ
ವರ್ಣಿಸುವ ಬಿ ಎ ಕಾಲೇಜಿನ ಲೆಕ್ಚರರ್ನ
ಪಾಠ ,
ಪಾರ್ಕಿನಲ್ಲಿನ ಚುಕ್ಕಿ ಉಸಿರು,
ಸೀಗರೇಟ್ ಅಡ್ಡಾಗಳಲ್ಲಿ "ಆಪರೇಷನ್ ಲವ್"
ಹಾಗೂ ಕ್ರಾಂತಿ ಮಾತಗಳು

ಮಣ್ಣು ತೊಟ್ಟಿಲಲ್ಲಿ ಮಲಗಿದ್ದ ಮಗುವಿಗೆ
ಮೊಬೈಲ್ ಹಿಡಿದು ರೊಮ್ಯಾಂಟಿಕ್ ಕಾವ್ಯ
ಒತ್ತಿ ಒತ್ತಿ ಹೇಳುವಾಗ ಕಂದನ ಕೈಕಾಲು
ಬಡೆದಾಡುತ್ತವೆ
ಬೈಪಾಸ್ ರಸ್ತೆಯ ತಿರುವಿನ ಪಾನೀಪುರಿ
ಅಂಗಡಿ ಮೋಟ ಹುಡಗ ಇತ್ತೀಚೆಗಷ್ಟೆ
ಸುಮ್ಮನೆ ನಗುತ್ತಿದ್ದ
ಆ ಹುಡುಗಿ ತಾತ್ಕಾಲಿಕ ನಗು ಕಾರಣ !
ಹಸಿದ ಹೊಟ್ಟಿ ತಣ್ಣಗಾಗಿರಬಹದು !

ಮಧ್ಯರಾತ್ರಿ ಬೆಣಚು ಕಲ್ಲುಗಳ ಮೇಲೆ
ಹೆಸರು ಕೆತ್ತುವ ಖಯಾಲಿ
"ಹೇ" ಯಾರದು ಈ ರಾತ್ರಿ
ಹಳದಿ ಕಾಯಿಲೆ ಹೂವಿನ ಶವಕ್ಕೆ 
ಅತ್ತರ ಸಿಂಪರಿಸುವವರು
ಸ್ಮಶಾನದ ನಟ್ಟನಡುವಿನ
ಅಸ್ತಿತ್ವದ ಗೈರಾಗಬಹದು
ಕಂಬನಿ ತುಟಿಗಳ ಮಧ್ಯ ನಡಗುವ ರಾತ್ರಿಗಳ
ನೀರವತೆ "ಛೇ" ಈ ಒಣ ಹವೆಯಲ್ಲಿ
ತಾತ್ಕಾಲಿಕ ಪ್ರೇಯಸಿ ನೆನಪು

ಒಂದೇ ನೋಟ್ ಬುಕ್ನ್ ಎರಡು ಕಥೆ
ಬೆರಳ ತುದಿ ಚಿತ್ರಿಸುವ  ಹಳೆ ಹಾರ್ಟ್ ಸಿಂಬಾಲ್
ಅತ್ತು ಬೆತ್ತಲಾಗುವ ಎಷ್ಟೋ ಲಾಸ್ಟ್ ಬೆಂಚ್
ಲವ್ ಸ್ಟೋರಿಗಳು ಕೊನೆಗೊಮ್ಮೆ
"ಪ್ರೀತಿ ಬಾರ್"ನ್ ತಳ ತುಂಬಿಕೊಳುತ್ತವೆ

#ಪಿ ಕೆ...?

Wednesday, 15 August 2018

ತಾತ್ಕಾಲಿಕ ಪ್ರೇಯಸಿ -2( ರಮ್ಯ ಕಡೂರು/ ಸಾವನ್ ಪದ್ಯಗಳು)

ತಾತ್ಕಾಲಿಕ ಪ್ರೀಯಕರ

ನಡುರಾತ್ರಿಯ ಚಂದಿರನ
ಬೆಳಕಲಿ ಹೆಣೆದ ಕಲ್ಪಿತ
ನೆರಳಲ್ಲಿ ಆಲೋಚಿಸುತ್ತೇನೆ ಆಳದ ಏಕಾಂತದಲ್ಲಿ ನಮ್ಮಿಬ್ಬರ ಪ್ರತಿಬಿಂಬವೆಂದು

ಅದ್ಯಾವ ಪ್ರವಾಹ ನೀನು?
ಮನಕಲಕಿ ನಿಶಬ್ಧವಾಗಿ ಮರೆಯಾಗಿಬಿಟ್ಟೆ
ಇರುವುದಕ್ಕೆಲ್ಲಾ ಬೆನ್ನಿಕ್ಕಿ
ನಾಚಿ ತಿರುಗಬೇಡ ?
ಅಲ್ಲಾದರೂ ನಿನ್ನ ತಾತ್ಕಾಲಿಕ
ದರುಷನವಾಗಬಹುದು

ನನ್ನ ಅರೆನಗ್ನ ಬೆನ್ನಮೇಲೆ ಕವಿತೆ ಬರೆಯುವ
ನಿನ್ನ ಬಯಕೆ
ಎತ್ತ ಹೊರಟು ಹೋಯಿತು ಇನಿಯ?
ಇಗೋ ಇಲ್ಲಿದೆ ಆ ಪ್ರಶಾಂತತೆ
ಬಂದುಬಿಡು ಮರುಮಾತಾಡದೆ  !

ವಿನಾಕಾರಣ ಜೀವ ಹಸಿಯುತದೆ, ಬಳಲುತದೆ
ಕ್ಕೊಕ್ಕಿನ ಕಡಲ ಹಕ್ಕಿಯೊಂದಕ್ಕೆ ಸಿಲುಕಿದ ಮೀನಿನಂತೆ ಸುಮ್ಮನೆ ಈ ರಾತ್ರಿ ಹಿಂಬಾಲಿಸಿ ಬಿಡು ಎಲ್ಲಾ ರಿಯಾಯಿತಿಯು ನಿನ್ನದೆ !

ನೀನು ಈ ದೇಹದ ಚೇತನವಲ್ಲ
ಇಗಿಗ ತಾತ್ಕಾಲಿಕ ಪ್ರೀಯತಮನಷ್ಟೆ !

ಸಂದೇಶಗಳೆಲ್ಲ ಕುರುಹುಗಳಾಗಿವೆ ತಾತ್ಕಾಲಿಕ ಪ್ರೀತಿಗೆ ಆದರೂ ಸದಾ ನನ್ನೆದೆಯಲಿ
ಹೂ ನೀನು
ಬಾಡುವುದಿಲ್ಲ ಮತ್ತೆಂದಿಗೂ ಅರಳುವುದಿಲ್ಲ!
ಇದೊಂದು ಅನುಭಸುವಿಕೆಯಷ್ಟೇ
ಈ ಪದ್ಯದಂತೆ !

ರಮ್ಯ, ಕಡೂರು

2)

ತಾತ್ಕಾಲಿಕ ಪ್ರೇಯಸಿ

ನಿನ್ನ ಸ್ಪರ್ಶಿಸುವ ತವಕದಲಿ
ಬಿಸಿ ಏರಿಳಿತದ ಹೃದಯ
ಯಾವ ಸೂಚನೆಯು ಕೊಡದ ನಿನ್ನ
ಸ್ಪರ್ಷದಿ ಹಗುರಾಯಿತು !

ನನ್ನೀ ಬೇಸಿಗೆಯ ತುಟಿಗೆ
ನಿನ್ನ ಚಳಿಗಾಲದ ಚುಂಬನ
ಒಂದು ಬೆವರಾಯಿತು
ಇನ್ನೊಂದು ಕಣ್ಣೀರಾಯಿತು !

ಸೂರ್ಯ ದೇಹಕ್ಕೆ
ಚಂದಿರೆಯ ಗಾಳಿ ಸೋಕಿರಲು
ಸುರಿವ ನಕ್ಷತ್ರಗಳ ಮಳೆಗೆ
ಈ ಭೂಮಿಯೇ ಮಧುಮಂಚ !

ಅಮವಾಸೆಯ ನಡುರಾತ್ರಿ
ಬೆತ್ತಲಾದ ಕಿಡಿಗೇಡಿ ಮನಕ್ಕೆ
ನಿನ್ನುಸಿರ ಶಾಖ ತಾಕಿದಾಗ
ನಮ್ಮಿಬ್ಬರ ಮೊದಲ ರಾತ್ರಿಯು
ಸೋತು ಗೆದ್ದಿತು !
          
          ಸಾವನ್, ಕಲಬುರಗಿ.

Tuesday, 14 August 2018

ತಾತ್ಕಾಲಿಕ ಪ್ರೇಯಸಿ/ ಪ್ರೀಯಕರ !

ತಾತ್ಕಾಲಿಕ ಪ್ರೀಯಕರ

ಶ್ರಾವಣದ  ಕಡು ಪಾಪಿ ಮಳೆ
ವಿರಹ ಗೋಡೆಗೆ ಕಾಮನ ಬಾಣದ ಹೊಡೆತ
ತೀವ್ರ ಮೋಹದಲೆಗಳ ಸುನಾಮಿ ನಡಿಗೆ !
ಅವನೊಳಗೂ ಥಂಡಿ ಗಾಜಿಗೆ ಬಿಸಿ ತುಟಿಯ ಸ್ಪರ್ಶ !

ಅವನೋ ಗಂಧರ್ವ ಲೋಕದ ಮೋಡಿಗಾರ
ಘಳಿಗೆ ಸಿಕ್ಕು ಅಮಲೇರಿಸಿ ಮುದ್ದಿಸಿ ಮರೆಯಾಗುವ
ತಾತ್ಕಾಲಿಕ  ಮಾಯಗಾರ
ಆಯಾಸಗೊಂಡ ಪ್ರಯಾಣದ ತುಂಬೆಲ್ಲಾ
ಕಾಡುವ ಕಚಗುಳಿ ಬೆರಳುಗಳ ಯಾನ !

ಅವನ ಪ್ರಣಯದ ಕಥೆಯನ್ನೇ ಪದೇ ಪದೇ ಓದಿಕೊಳ್ಳುವ ನಾನು ಇದೀಗ ಇನ್ನಷ್ಟು
ಅಸಹಾಯಕ ಹಿಂಸೆಗೆ ಬಲಿಯಾದ ಒಂಟಿ ಹಂಸ ಪ್ರೇಮಿ !
ಇಲ್ಲಿ ಗೋಡೆಗಳು ಮೈಬಿಸಿಗೆ ಗೋಣು ಬಗ್ಗಿಸಿವೆ !

ಎದುರಿಗೊಬ್ಬ  ದುರುಗುಟ್ಟುವಾಗ
ಅವನಿರಬೇಕಿತ್ತು ಈ ಕ್ಷಣ !
ಛೇ ! ಮತ್ತೆ ದೀರ್ಘ ಉಸಿರು ಬಿಡುತ್ತಾ ಹೆಡ್
ಫೋನ್ಸ್ ಕಿವಿಗಿಟ್ಟರೆ "ಅಂಗ ಲಗಾ ದೇ ರೇ.." ರಿಂಗಣಿಸಿ ಮೈಯೆಲ್ಲಾ ಮತ್ತಷ್ಟು ಚಳಿಗೆ
ಬಿಸಿ ನಾಲಿಗೆಯ ಹಂಬಲ !

ಸಿಕ್ಕು ಬಿಡಲಿ ಅವನೊಮ್ಮೆ
ಒಂಟಿ ರಾತ್ರಿಗೆ ಜೊತೆಯಾಗಿ ತಣ್ಣನೆಯ ಬೆಳದಿಂಗಳಿರಲಿ
ಕೊಡು ಕೊಳ್ಳುವ ಕೆಂಡಗಳ ಲೆಕ್ಕವೊಂದು ತೀರಲಿ
ಇಂದಿಗೂ ಘಟಿಸದ ಹೆಣ್ತನವೊಂದು ಜರುಗಲಿ
ಮೊಗ್ಗೊಂದು ಹಾಗೆಯೇ ಸದ್ದಿಲ್ಲದೇ ಹೂವಾಗಲಿ...!

      ಸ್ನೇಹಲತಾ.

ತಾತ್ಕಾಲಿಕ ಪ್ರೇಯಸಿ

ಕಾಫಿ ಕಪ್ಪಿನ ಕೊನೆಯ ಹನಿಯಲ್ಲು ಕೆನೆಗಟ್ಟಿದ ಕಡಲಿದ್ದಿದ್ದರೆ
ನಿನ್ನ ಫೋಟೋಗೊಂದು ಮುತ್ತಿಟ್ಟಿದ್ದಕ್ಕೆ ಮೊಡವೆಯೇ ಏಳುತ್ತಿರಲಿಲ್ಲ!
ಹತ್ತು ಸಲ ಲೈಕ್ ಒತ್ತಿದ್ದರು ನೆಟ್ಟಗಾಗದ ಸೊಟ್ಟ ಮುಖದ ಫೋಟೋ,
ಫೋನ್ ಸ್ಕ್ರೀನಿಗೆ ಸಿಗುವಷ್ಟು ಸುಲಭವಾಗಿ ತುಟಿಗೆ ಸಿಕ್ಕಿದ್ದರೆ, ಚಳಿಗಾಲದಲ್ಲೂ ಬೆವರುವ ಕೆಲಸ ಸಿಗುತ್ತಿತ್ತೇನೋ ?!

ಬೆರಳ ಸೋಕುವುದೂ ಕೂಡ ಬೆದೆಯಂತೆ ಕಾಡುವಾಗ,
ಆಷಾಢದ ಗಾಳಿಯ ಕೆನ್ನೆಗೂ ಒಂದೆರಡು ಲಿಪ್ಸ್ಟಿಕ್ ನ ಗುರುತು ಸಿಗಬೇಕಿತ್ತು!
ದೂರದಲ್ಲಿ ಬೀಸುವ ಚಂಡಮಾರುತಕ್ಕೆ ಮೈ ಮೇಲಿನ ಉಲ್ಲನಿನ ಸ್ವೆಟರ್ ಆಗಿರುವ ನೀನು
ತಾತ್ಕಾಲಿಕ ಶಾಖ ಹೆಚ್ಚಿಸುವ ಶಾಖೆ.
ಚಳಿಗಷ್ಟೇ ಬೆಚ್ಚಗೆ!

ನೀ ಹೊಸ ಜೀನ್ಸ್ ತೊಟ್ಟ ದಿನ
ನನ್ನ ಅಂಗಿಯ ಗುಂಡಿ ಕಿತ್ತು ಹೋದ ಹಾಗೆ ಕನಸು ಬೀಳುತ್ತದೆ!
ಏನು ಮಾಡಲಿ ತೊಟ್ಟಿಕ್ಕುವ ನಲ್ಲಿಗೆ ಮಾತಾಡುವ ನಾಲಿಗೆ ಇಲ್ಲ.
ಇರುಳೆಲ್ಲ ರಸಶಾಸ್ತ್ರ ಓದಿದರೂ ಸಹ, ನಿನ್ನೆದುರು ಸಿಕ್ಕಾಗ ಅನಕ್ಷರಸ್ತನಂತೆಯೇ ವರ್ತಿಸುವೆ, ನಿನಗೆ ಗೊತ್ತಾಗುವ ಹಾಗೆ!

ನಿರಪರಾಧಿ ನೀಲಿ ತಾರೆಯಾಗಿರುವ ನನ್ನ ಯೌವ್ವನಕ್ಕೆ ,
ಬಟ್ಟೆ ತೊಟ್ಟವರ ಬೆನ್ನಳತೆ ತಿಳಿಯದು!
ನಿನ್ನ ಕಿರು ಬೆರಳನೂ ತಾಕದ ಕಣ್ಣೊಳಗಿನ ಕೈಯಲಿ ಯಾವ ಮೈಥುನದ ಗುರುತೂ ಇಲ್ಲ!
ಮಳೆಗಾಲಕೆ ಮೈಯೊಡ್ಡಿದ ಕೊಡೆಯಂತ್ತಿರುವ ನಿನಗೂ ತೊಟ್ಟಿಕ್ಕುವ ತವಕ ಇರಬಹುದೇನೋ?

                        # ಕವಿಚಂದ್ರ

Thursday, 17 May 2018

ಕಾವ್ಯಮನೆ ನಿರ್ದೇಶಕ ಚಾಂದರವರ ಪದ್ಯ..

ಮೋರಿ ಅಲೆ

ದನದ ಉಚ್ಚೆಯಲಿ ದಾರಿ ಮಾಡಿ,
ಕೆಚ್ಚಲಲಿ ಕಿರೀಟ ತೊಟ್ಟು,
ಬಾಯಿಯಲ್ಲ ಬಚ್ಚಲು ಮಾಡಿ
ಬಾಯ್ಬಡುಕೊಂಡು ಬಂತು ನೋಡಿ
ಚರಕ ಹಿಡ್ದನ್ ನರಕ ತೋರ್ಸಿ,
ಹೊಲ್ಸು ಬಾಯಲ್ ರಾಮನ್ ಕರ್ಸಿ
ಗೋಡ್ಸೆಗೆಲ್ಲ ಗುಡಿಯ ಕಟ್ಟಿ
ಕಂಡವರಿಗೆಲ್ಲ ಗೋರಿ ಕಟ್ಟ್ಸಿ
ಹೆಜ್ಜೆ ಇಟ್ಟಲೆಲ್ಲಾ ರಕ್ತದ ದಾರಿ
ನಮ್ಮೂರಿಗೂ ಬಂತೂ ನೋಡ್ರೋ ಮೋರಿ!

ಗೋಧ್ರಾ ಗಿದ್ರಾ ಮರತೇ ಇಲ್ಲ
ಸುಟ್ಕೊಂಡವರು ಬದ್ಕೇ ಇಲ್ಲ
ಆದ್ರೂ ಇವನೇ ರಾಜ ಅಂತೆ
ಕುರುಡರ್ ಊರಾಗ್ ಒಂದೇ ಲಾಟಿ ಅಂತೆ
ಖಾಕಿ ಚಡ್ಡಿ ಹುಡ್ಗ ಇವನು,  ಹೆಡ್ರೂ ಇದ್ರೂ ಬ್ರಹ್ಮಚಾರಿ!
ಮೊನ್ನೆ ಗಾಂಧಿ ಕಣ್ಣು ಕಿತ್ತಿ ಸ್ವಚ್ಚ ಭಾರತ್ ಮಾಡದವನಂತೆ!
ಅನ್ನಗಿನ್ನ ತಿನ್ನಕ್ಕಿಲ್ಲ ಅಣಬೆ ಅಂದೆ ಪ್ರಾಣ ಅಂತೆ!
ದನದ ಬಾಡು ಮುಟ್ಟೆ ಇಲ್ಲ ಕೊಟ್ಟರೇ ಬ್ಯಾಡ ಅನ್ನಲ್ಲವಂತೆ !

ದೇಶ ಆಳಾಕೆ ಬಂದ್ವನಂತೆ ವಿಶ್ವಗುರು ಆಗೌನಂಥೆ!
ಹೆಂಡ್ರು ಮಕ್ಳು ಇಲ್ದೇ ಇದ್ರೂ ಆಸ್ತಿಯಂತೂ ಭಾರಿಯಂತೆ!
ಬೇಂದ್ರೆ ಗಿಂದ್ರೆ ಅಂತನಂತೆ ಕವಿತೆಗಿವಿಗೆ ಹಾಡ್ತಾನಂತೆ
ಬಾಯಿ ಬಿಟ್ರೇ ಬಚ್ಚಲ್ ವಾಸನೆ ಡೆಟಾಯಿಲ್ ಪೆನಾಯಿಲ್ ಕೊಡಬೇಕಂತೆ !

ಭಾರತದಾಗೆ ಇವನ್ ಭಕ್ತರೂ ಭಾರಿ ಆವರೇ,
ಎದೆಯ ಸೀಳಿ ಇವ್ನ್ ಫೋಟೋ ತೋರ್ಸಾರಂತೆ!
ರಾಮ ಬಿಟ್ರೇ ನೆಟ್ಸೂ ಇವನೇ,
ಸೀತೆಯಂತೂ ಲೆಕ್ಕಕ್ಕಿಲ್ಲ
ಕಲಿಯುಗ್ದ್  ಕಾಮಧೇನು ಲೋಕ ಉದ್ದಾರ ಮಾಡ್ತಾನಂತೆ !
ಜೈಲೂರಪ್ಪ ಇವನ ಭಕ್ತ , ಮನೆಲಿ ಇವನ್ದೇ ಫೋಟೋ ಅಂತೆ
ಅವನ ಅಂಗಾಲೂ  ನೆಕ್ಕೋದರಲ್ಲಿ ನಾಯಿಗಿಂತ ಇವನೇ ಮೇಲಂತೆ !

ಈ ಮುದುಕನ ಬಾಯಲಿ ಹಲ್ಲೇ ಇಲ್ಲ ಆದ್ರೂ ರಾಜ್ಯ ಆಳ್ತಾನಂತೆ
103 ಕೆ ನಿಂತ್ತೆ ಬಿಟ್ಟಿದೆ, ಆದರೂ ಗದ್ದಿಗೆ ಅವನ್ದೇ ಅಂತೆ !
ಕಮಲ ಬಿಟ್ಟು  ಹೋಗಿದ್ದನಂತೆ ಒಡೆದ ತೆಂಗಿನ ಕಾಯಿ ಆಗಿದ್ನಂತೆ!
ಜೈಲಿಗೂ ಇವನ್ಗೂ ಭಾರಿ ಸದರಾ
ಆಗಾಗಾ ಹೋಗಿ ಬಂದು ಮಾಡ್ತಾನಂತೆ !

ಆಣೆ ಇಡಾಕೆ ಎಲ್ರೂ ಸತ್ರೂ
ರೈತರ್ರೂ ಇನ್ನೂ ಬದ್ಕೇ ಐವರೇ
ಅವರ ಮೇಲೂ ಆಣೆ ಮಡಗಿ ಐತು, ಮೈತ್ರಿ ಗಿತ್ರಿ ಒಪ್ಪಕ್ಕಿಲ್ಲ
ತನ್ನೇ ಮಾರ್ಕೊಂಡವನಂತೆ  ತಿರ್ಪೆವಾಲಾ!
ಗದ್ದಿಗೆಗೆ ಈಗ ನಾಯಿ ಬಂತು
ಊರು ಕೇರಿ ಎಲ್ಲ  ದನದ ಉಚ್ಚೇ ವಾಸನೆ
ಅದೇ ಬಾಯಲಿ ಒದರತಾ ಐತೇ ಒಂದೇ ಸಮನೆ
ಭಾರತ ಮಾತಕೀ ಅಂತೆ ಜೈ ಭಾರತ ಮಾತಾಕೀ ಜೈ.........ಅಂತೆ

                   #  ಕವಿಚಂದ್ರ

Saturday, 18 November 2017

ಸಾವು

ದ ಡೆತ್ ಆಫ್ ಇವಾನ್ ಇಲಿಚ್ (ಸಾವು) - ಲಿಯೋ ಟಾಲ್ ಸ್ಟಾಯ್.
ಅನು :- ಓ ಎಲ್ ನಾಗಭೂಷಣ ಸ್ವಾಮಿ.

ಈ ದೀರ್ಘ ಕಥೆಯ ಪ್ರತಿ ಪುಟದಲ್ಲಿಯು, ನಿಜವಾದ ಬದುಕೆಂದರೆ ಯಾವುದು ? ಅದು ಹೇಗೆ  ? ಮನುಷ್ಯ ಬದುಕಿನ ಸತ್ಯಗಳನ್ನು  ಒಪ್ಪಿಕೊಳ್ಳದೆ, ತನ್ನ  ಅಭಿಪ್ರಾಯಗಳನ್ನು  ಯಾಕೆ ಸಮರ್ಥಿಸಿಕೊಳ್ಳುತ್ತಲೆ ಸಾಗುತ್ತಾನೆ ? ಎನ್ನುವುದನ್ನು ಎದುರುಗೊಳ್ಳುತ್ತಲೆ ನಾವು ಅದನ್ನು ಕಂಡುಕೊಳ್ಳಲು ಯೋಚಿಸಬಹುದಾದ ದಾರಿಗಳಿವೆ.  ಸಾವಿನ ತೀರಾ ಹತ್ತಿರವಿರುವ ರೋಗಸ್ಥ ಮನುಷ್ಯನೊಬ್ಬನ ನರಳುವಿಕೆಯ ಕಥೆ ಇದು. ಅವನು ನಾ ಸಮುದ್ರದಾಳದಲ್ಲಿಯಾಗಲಿ ಅಥವಾ ಭೂಮಿಯ ಗರ್ಭದಲ್ಲಾಗಲಿ ಇಷ್ಟು  ಒಂಟಿತನ ಅನುಭವಿಸಲು ಸಾಧ್ಯವೆ ಇಲ್ಲ ಎನ್ನುತ್ತಾನೆ.

ಇವಾನ್ ಇಲಿಚ್ ಸಮಾಜದ ಕಣ್ಣಿಗೆ  ಒಬ್ಬ ಪರಿಪೂರ್ಣ ಮನುಷ್ಯ. ಮನೆ, ಹೆಂಡತಿ, ಮಕ್ಕಳು,  ಉದ್ಯೋಗ  ಎಲ್ಲವೂ ಉಂಟು ಆದರೆ ಅವನ ಕ್ರಮಬದ್ಧವಾದ ಬದುಕು ಅವನಿಗೆ ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಉಲ್ಟಾ ಹೊಡೆಯುತ್ತದೆ. ಸಂಸಾರದ ಭಿನ್ನಾಭಿಪ್ರಾಯಗಳು, ಮಗಳ ಒಣ ತಿರುಗಾಟ , ಹೆಂಡತಿಯ ಯಾಂತ್ರಿಕತೆ ಇವೆಲ್ಲ ಅವನನ್ನು ಕೊನೆಗಳಿಗೆಯಲ್ಲಿ ಹೇಸಿಗೆ ತರಿಸುತ್ತವೆ.

"ಟಾಲಸ್ಟಾಯನ ಈ ಕಥೆ ಸಾವನ್ನು ಕುರಿತು ನಾನು ಓದಿರುವ ಗ್ರೇಟೆಸ್ಟ್ ಕಥೆ" ಎಂದು ಹೇಳುವ ಓ ಎಲ್ ಎನ್ ಅವರು ತುಂಬಾ ಅಚ್ಚುಕಟ್ಟಾದ ಅನುವಾದ ಮಾಡಿದ್ದಾರೆ.  ಕಥೆಯ ಒಂದು ಗೆರೆಯು ಸರಿಯದಂತೆ.

ಕನ್ನಡದ ಸಾಹಿತ್ಯದಲ್ಲಿಯು ಸಾವಿನ ವಿಷಯ ವಸ್ತು  ಇಟ್ಟುಕೊಂಡು ಹಲವು ಬರಹಗಳು ಬಂದಿವೆ. ಆದರೆ ನನ್ನ ಮಟ್ಟಿಗಂತೂ ಇಷ್ಟು  ಅಚ್ಚುಕಟ್ಟಾಗಿರುವ ಕಥೆ ಇನ್ನೊಂದಿಲ್ಲ.  ಇಲಿಚನಲ್ಲಿರುವ " ಸಾವು ಎಂಬ ಒಂದು ಪ್ರಜ್ಞೆಯಲ್ಲಿ " ಏನೆಲ್ಲಾ ಬಿಚ್ಚಿಕೊಳ್ಳುತ್ತ ಹೋಗುತ್ತಾನಲ್ಲ, ಅವನ ಬಾಲ್ಯ,  ಬದುಕಿನ  ಅತ್ಯುತ್ತಮ ಸಂಗತಿಗಳು ಇವೆಲ್ಲವನ್ನೂ ಉಸಿರಿನಂತೆ ಒಳಗೆಳೆದುಕೊಳ್ಳುತಿರುವಾಗ , ಅವನು ಬದುಕಬೇಕಾಗಿದ್ದು ಹೀಗಲ್ಲ ಎನಿಸುತ್ತಿರುತ್ತದೆ. ಆದರೆ ಬದಲಾವಣೆಗೆ ಹೊರಳಬೇಕಂದರು ಕಪ್ಪು ಚೀಲದಲ್ಲಿ ಬಂಧಿಯಾಗಿ ಬರೀ ಕೊರಳಿನಿಂದ ಮಾತಾಡುವ ಸ್ಥಿತಿಯಲ್ಲಿರುತ್ತಾನೆ.

ನನಗೆ ಪೀಟರನ ವರ್ತನೆ ತುಂಬಾ ಕಾಡಿತು. ಸಾಮಾನ್ಯವಾಗಿ ನಾವು ದೂರದವರ ಸಾವನ್ನು ಗಂಭೀರವಾಗಿ ಪರಿಗಣಿಸುವುದೆಯಿಲ್ಲ ಅದು ಪರಿಗಣಿಸಬೇಕೆ ? ಏನೋ ಗೊತ್ತಿಲ್ಲ  ಅದೊಂದು ನಮ್ಮೊಳಗಿನ ವಿಷಯ. ಕುವೆಂಪು ಸಹ ಹೇಳುವುದು ಇದನ್ನೆ ತೀರಾ ಹತ್ತಿರದವರ ಸಾವು ಮಾತ್ರ ಹೃದಯ ಅಲುಗಾಡಿಸುತ್ತದೆಯಂದು. ಪೀಟರ್ ಇಲಿಚನ ಹೆಣ ನೋಡಿ ಹೇಳಿಕೊಳ್ಳುತ್ತಾನೆ, " ಸತ್ತವನು   ನಾನಲ್ಲವಲ್ಲ !". ಹೌದು ಪ್ರತಿಯೊಬ್ಬ ಮನುಷ್ಯ ಹೀಗೆ ಹೇಳಿಕೊಳ್ಳುತ್ತಲೆ ಇರುತ್ತಾನೆ.

" ಕಾಯಿಲೆ ಮತ್ತು ಆರೋಗ್ಯ ಮಾತ್ರ  ಅವನ ಆಸಕ್ತಿಯ ವಿಷಯಗಳಾದವು"- ನಾವೆಲ್ಲ  ಆರಾಮಾಗಿ ಇದ್ದಾಗ ಯಾವುದರ ಬಗ್ಗೆಯು ಯೋಚಿಸುವುದೆಯಿಲ್ಲ. ನಮ್ಮ ಮನೆಯ ಅಜ್ಜಿಗೆ ನೋಡಿದಾಗಲೆಲ್ಲ ವಯಸ್ಸಾಯ್ತಲ್ಲ ನರಳ್ತಾರೆ ಅನಸುತ್ತೆ. ಆದರೆ ನಮಗೆ ಆ ನರಳಾಟ ಆದರೆ ನಮ್ಮ ಯೋಚನೆಯ ಲಹರಿಯೆ ಬದಲಾಗುತ್ತದೆ. ಇಲ್ಲಿಯು ಸಹ ಇಲಿಚ 45 ವಯಸ್ಸಿಗೆ ಸತ್ತವನು ಅವನದೆನು ಸಾಯುವ ವಯಸ್ಸಲ್ಲ.

"ಶುದ್ಧ ಮನಸ್ಸನ್ನು ಕಳೆದುಕೊಂಡಿರುವ ಹದಿಹರೆಯದ ಹುಡುಗರ ಕಣ್ಣಿನಂತೆ ಆ ಹುಡುಗನ ಕಣ್ಣು ನೀರು ತುಂಬಿದವು" -  ತನ್ನ  ಸ್ಥಿತಿ ಕಂಡು ಅಳುವ ಮಗನ ಬಗ್ಗೆ  ಈ ರೀತಿ ಹೇಳುತಿದ್ದಾನೆ.
" ಮನುಷ್ಯನ ಸ್ವಭಾವಗಳ ಬಗ್ಗೆ  ಅವನು ಒಪ್ಪಿಕೊಳ್ಳಬೇಕಾದ ಸತ್ಯಗಳ ಬಗ್ಗೆ ಈ ಕಥೆಯಲ್ಲಿ ಟಾಲಾಸ್ಟಾಯಿ ಮಾತಾಡುತ್ತಿದಾರೆ" . ನಾವೆಷ್ಟೆ ಜನರ ಸಾವು ನೋಡಿದಾಗಲೂ, ನಾನು ಭಿನ್ನ  ಅದು ಹೇಗೆ ನನ್ನ ಸಾವಾಗುತ್ತದೆ ನಾನು ಅನಂತ ಎಂಬ ಉಡಾಫೆ ಇದ್ದೆ ಇರುತ್ತೆ,  ಮನುಷ್ಯ ತನ್ನ ಬದುಕುವ ರೀತಿಗೆ ಸಮರ್ಥನೆಗಳನ್ನು ಇಲಿಚನಂತೆ ಕೊಟ್ಟುಕೊಳ್ಳುತ್ತಲೆ ಹೋಗುತ್ತಾನೆ. ಆದರೆ ಬದುಕಿನ ಸತ್ಯಗಳು ಒಪ್ಪಿಕೊಂಡಷ್ಟು ನಮ್ಮ ಬದುಕು ಸುಂದರ...

# ಕಪಿಲ .ಪಿ ಹುಮನಾಬಾದೆ
18/11/2017.