Thursday 7 May 2020

ಮುದಿರಾಜ್ ಬಾಣದ್ ಅವರ ಬಿಡಿ ಚಿತ್ರಗಳ ಕಥನ ಚಾನ್ನೆ - ಕಪಿಲ ಪಿ ಹುಮನಾಬಾದೆ

ಚಾನ್ನೆ ( ಕಥಾಸಂಕಲನ)- ಮುದಿರಾಜ್ ಬಾಣದ್.

ನಮ್ಮ ಉತ್ತರ ಕರ್ನಾಟಕದ, ನಮ್ಮ ವಾರಿಗೆಯ ಹೊಸಬರ ಕಥಾಸಂಕಲನ ಇದು. ಹಲವು ಕಾರಣಕ್ಕೆ ಈ ಕಥೆಗಳು ಓದಿಸಿಕೊಂಡು ಹೋಗಿವೆ. ಸುಮಾರು 12 ಕಥೆಗಳಿರುವ ಈ ಸಂಕಲನ ತುಸು ಭಿನ್ನವಾಗಿದೆ. ಇಲ್ಲಿ ಯಾವ ಕಥೆಯೂ ಪುಟಗಳ ದೃಷ್ಟಿಯಿಂದ ದೀರ್ಘವಾಗಿಲ್ಲ. ತುಂಡು ತುಂಡು ಘಟನೆಗಳ ಬಣ್ಣ ಬಳಿದಿಟ್ಟ ಹಾಳೆಗಳು ಓದುಗನೆದುರು ಚದುರಿ ಬಿದ್ದಿವೆ, ನಾವೇ ಇಲ್ಲಿ ಈ ತುಂಡುಗಳು ಜೋಡಿಸಿಕೊಂಡು ನಮಗೆ ಬೇಕಾದ, ಆ ಸಮಯದಲ್ಲಿ ಸರಿಯೇನಿಸುವ ಚಿತ್ರ ಹೊಂದಿಸಿಕೊಂಡು ಕಥೆ ಪೂರ್ಣಮಾಡಿಕೊಳ್ಳಬೇಕು. ಇಲ್ಲಿ ಯಾವ ಕಥೆಗೂ ತುದಿಯೆಂಬುವುದಿಲ್ಲ. 

" ಬರೆದರೆ ಮಾತ್ರ ಹಗುರವಾಗುತ್ತೇನೆಂದು ಪ್ರಾಮಾಣಿಕವಾಗಿ ಬರೆದ ನನ್ನದೆ ನಿಜ ಜೀವನದ ಅಷ್ಟೂ ಇಲ್ಲಿನ ಕತೆಗಳಾಗಿ ಹೊರಹೊಮ್ಮಿವೆ" - ಎಂದು ಹೇಳಿಕೊಂಡಿರುವ ಮುದಿರಾಜ್ ಅವರ ಈ ಮಾತುಗಳು ಅವರ ಕಥೆಗಳು ಓದಿದಾಗ ನಿಜವೆನಿಸುತ್ತವೆ.  ಜೇಜಮ್ಮ ಕಥೆಯೊಂದು ಚೂರು ಬಿಟ್ಟರೆ ಇಲ್ಲಿ ಬರುವ ಬಹುತೇಕ ಕಥೆಗಳು ಮನುಷ್ಯನೊಬ್ಬನ ಅತ್ಯಂತ ನಿಕಟವಾದ ಕೌಟುಂಬಿಕ ಅನುಭವಗಳಂತೆ ಮೇಲುನೋಟಕ್ಕೆ ಕಾಣಿಸಿದರೂ, ಅದಲ್ಲದ ಯಾವುದೋ ಹೊಸ ಅನುಭವಗಳು ಬಿಚ್ಚಿಡುವ ಈ ಕಥೆಗಳು ರೂಪಕಗಳ ಮೂಲಕವೇ ಹಲವು ಸಂಗತಿಗಳು ಮೌನವಾಗಿಯೇ ಹೇಳುತ್ತವೆ.


ಸಿಂಹರಾಶಿ ಕಥೆಯಲ್ಲಿ ಬರುವ ಕೆಲವು ಸಾಲುಗಳಿವು -
"ಮತ್ತೆ ಅವನ ಮನಸ್ಸು ಎತ್ತಲೋ ಹರಿದರೂ ಸಹ ಅದು ಇವಳನ್ನು ದಾಟಿ ಹೋಗಲೊಲ್ಲದು. ಮನೆ ತುಂಬಾ ಕಸದ ರಾಶಿ. ಎಲ್ಲೆಂದರಲ್ಲಿ ಸಾಮಾನುಗಳು, ಹ್ಯಾಂಗರಿಗೆ ನೇಣುಹಾಕಿಕೊಂಡ ಶವಗಳಂತೆ ನೇತುಬಿದ್ದ ಶರ್ಟು ಪ್ಯಾಂಟುಗಳು, ಒಂದು ವಿಚಿತ್ರ ಮನಸ್ಥಿತಿಯಲ್ಲಿ ಓಡಾಡುವ ಇವಳು" - ಈ ಸಾಲುಗಳಂತೆ ಹಲವು ದಟ್ಟ ವಿವರಗಳು ನಮ್ಮೆದುರು ಬಿಡಿ ಚಿತ್ರಗಳ ಮೂಲಕ ಕಥೆಗಾರರು ಕೊಡುತ್ತಾರೆ.

ಇಲ್ಲಿ ಯಾವ ಕಥೆಯೂ ನೇರವಾಗಿ ಓದುಗನಿಗೆ ಹೇಳುವಂತಹವುಗಳಲ್ಲ. ಸಂಕೇತಗಳ ಮೂಲಕ ಧ್ವನಿಸುವ ಕಥೆಗಳಿವು.  

ಮೂಗುದಾಣದಲ್ಲಿ ಬರುವ ಮಕ್ಕಳ ಕಳ್ಳರು, ಸಿಂಹರಾಶಿ ಕಥೆಯಲ್ಲಿ ಬಸ್ಸೇರಿ ನಿಂತಿರುವ ಅಪರಿಚಿತ ಹುಡುಗರ ಮಾತುಗಳು, ಹೊತ್ತು ಮುಳುಗುವ ಮುನ್ನ ಆವರಿಸಿದ ಕತ್ತಲಲ್ಲಿ  ಬರುವ ಸೀಳು ನಾಯಿಗಳು, ಜೂಜು ಕಥೆಯಲ್ಲಿ ಬರುವ ಜಾಲಿ ಮರದ ಹಾದಿಯಲ್ಲಿ ಕಳೆದು ಹೋದ ಹುಂಜ, ಚಾನ್ನೆ ಕಥೆಯ ಬಾಯಿ ಬಾಯಿ ಬಡಿದುಕೊಳ್ಳುವ ಖಾಯಿಲೆ, ಜೇಜಮ್ಮನ ಮಾತುಗಾರಿಕೆ, ಕಟ್ಟಿರುವೆ ಕಥೆಯಲ್ಲಿ ಕಪ್ಪನೆಯ ಇರುವೆಗಳು ಮಗುವಿಗೆ ಗಾಯಗೊಳಿಸಿದ ಗುರುತು, ಕೈಚೀಲ ಕಥೆಯ ಭವಿಷ್ಯದ, ಭೂತದ ಸಂಗತಿಗಳ ಫೋಟೋಗಳು, ಹೇನು ಕಥೆಯಲ್ಲಿ ಅವಳ ಕೂದಲಿಂದ ಬುಳುಬುಳು ಬಿದ್ದ ಹೇನುಗಳು, ಅಂಬಿಕಾ ಕಥೆಯಲ್ಲಿ ಅಕ್ಕನ ಮಗಳು - ಹೀಗೆ ಈ ಎಲ್ಲಾ ಕಥೆಗಳಲ್ಲಿಯೂ ಒಂದು ರೂಪಕ ಅಥವಾ ಸಂಕೇತಗಳ ಮೂಲಕ ಭ್ರಮೆಗಳು ಓದುಗನೆದುರು ಕೆಡವಿಟ್ಟು ವಾಸ್ತವ ಹೇಳುವ ಮೂಲಕ ಕಥೆಗಳು ಭಿನ್ನವಾಗಿ ನಿಲ್ಲುತ್ತವೆ.

ಎಲ್ಲಾ ಕಥೆಗಳೂ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ. ಇವುಗಳೆಲ್ಲ ನಾಜೂಕಾಗಿ ಹೆಣೆದ ಬಲೆಯಂತೆ, ಕೌದಿಯಂತೆ ಕಾಣುತ್ತವೆ ಬಿಡಿಸಿ ನೋಡಿದಷ್ಟು ಅರ್ಥ ಜಾರುವ ಅಥವಾ ಈ ಕಥೆಗಳೆಲ್ಲ ಟ್ರೈನೊಂದುರ ಒಂದೊಂದು ಬೋಗಿಯಂತೆ ನನಗೆ ಕಾಣುತ್ತವೆ.

ಒಲ್ಲದ ಹೆಂಡತಿ, ಮುದ್ದಿನ ಮಕ್ಕಳು, ಬೇಸತ್ತು ನಿಂತಿರುವ ಗಂಡ, ಜೂಜಿನ ಅಪ್ಪ, ಮಗು ಮಲಗಿದ ರಾತ್ರಿ ಕೂಡುವ ಅವರ ಮಧ್ಯೆ ಕಟ್ಟಿರುವೆಗಳ ದಾಳಿ ಇವೆಲ್ಲ ಭಿನ್ನವಾಗಿ ಯೋಚಿಸುಂತೆ ಮಾಡುವ ಅವೇ ಪಾತ್ರಗಳ ಮರು ಬಂದು ನಿಂತು ಹೊಸ ಕಥೆ ಹೇಳಿದಂತೆ ಕಾಣುತ್ತವೆ.

ಮೊದಲ ಓದಿಗೆ ದಕ್ಕಿದ್ದಿಷ್ಟು. ಹಲವು ಮಗ್ಗಲುಗಳಲ್ಲಿ ಈ ಕಥೆಗಳು ನೋಡಬಹುದು. ಉದಾಹರಣೆಗೆ ಚಾನ್ನೆ ಕಥೆಯಲ್ಲಿಯೇ ಬರುವ ೫ ಭಾಗಗಳಲ್ಲಿಯೂ ಒಬ್ಬ ವ್ಯಕ್ತಿಯ ಬದುಕು ಹಿಂದಕ್ಕೂ ಮುಂದಕ್ಕೂ ಚಲಿಸಿ ವಾಸ್ತವಕ್ಕೆಸೆಯುತ್ತದೆ. ಶೇವಿಂಗ್ ಮಾಡಿಸುತ್ತಾ ಕೂತವ ಗೆಳೆಯನ ನೆನಪಿಗೆ ಜಿಗಿಯುತ್ತಾನೆ ಅಲ್ಲಿಂದ ಏಸುವಿನ ಪ್ರಾರ್ಥನೆ, ಅಪ್ಪನ ನೆನಪು, ಒಂಟಿತನದ ಬಯಕೆ, ಗಾಯಮಾಡಿಕೊಂಡ ಮಗಳು ಚಾನ್ನೆ, -"ಸುಮಾರು ವರ್ಷಗಳಿಂದ ಗಟ್ಟಿಯಾಗಿ ಅಲುಗಾಡದೆ ಇದ್ದ ಕಲ್ಲುಬಂಡೆಯಂತೆ" ಎನ್ನುವ ಹಾಲಿನೊಂದಿಗೆ ಈ ಕಥೆ ಮುಗಿಯುತ್ತದೆ. ಒಂದೇ ದಿಕ್ಕಿನಲ್ಲಿ ಇಲ್ಲಿನ ಕಥೆಗಳು ವಿವರಿಸಿಬಿಡುವುದು ಕಷ್ಟ.

ಒಂದೊಳ್ಳೆ ವಿಭಿನ್ನ ಪ್ರಯತ್ನದ ಮೂಲಕ, ಪ್ರಾಮಾಣಿಕ ಬರಹದ ಕಥೆಗಳ ಮೂಲಕ ಹಳೆ ಗಾಯಗಳಿಗೆ, ಮುಂದಿನ ಕನಸುಗಳಿಗೆ ಹೊಸ ಹಾಡು ಬರೆಯುತ್ತಿರುವಂತೆ ಇಲ್ಲಿನ ಕಥೆಗಳು ಕಾಣುತ್ತವೆ. ಒಂದು ಚೌಕಟ್ಟು ತಯಾರಿಸಿಟ್ಟುಕೊಂಡು ತಮಗೆ ಬೇಕಾದ ಕಥೆಗಳು ಅದರೊಳಗಿಟ್ಟು ಹೇಳುವ ಮುದಿರಾಜ್ ಬಾಣದ್ ಅವರು ಮುಂದೆ ಇನ್ನಷ್ಟು ಹೊಸ ಪ್ರಯೋಗಗಳ ಮೂಲಕ ಇದೇ ರೀತಿ ಭಿನ್ನ ನಿರೂಪಣೆ, ಚೌಕಟ್ಟಿನ ಕಥೆಗಳು ನೀಡಲಿ.

* ಚಾನ್ನೆ ಪದದ ಅರ್ಥ- ಬೆಳದಿಂಗಳು.

# ಕಪಿಲ ಪಿ ಹುಮನಾಬಾದೆ.
7/05/2020

Thursday 16 April 2020

ಚಾರ್ಲಿ ಚಾಪ್ಲಿನ್ ( ಕುಂ.ವೀ) ಪುಸ್ತಕ ಪರಿಚಯ - ಕಪಿಲ ಹುಮನಾಬಾದೆ

*ಜಗತ್ತು ಕಂಡ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ಅವರ 131ನೇ ಜನ್ಮದಿನವಿಂದು*. ಚಾರ್ಲಿ ಚಾಪ್ಲಿನ್ (16/04/1889-25/12/1977).

ಚಾಪ್ಲಿನ್ (ಜೀವನ ಮತ್ತು ಸಾಧನೆ)
- ಕುಂ . ವೀರಭದ್ರಪ್ಪ.

ಮೇಜಿನ ಮೇಲೆ ಈ ತಿಂಗಳು ಓದಲೆಂದು ಕೂಡಿಟ್ಟ ಪುಸ್ತಕಗಳೆಲ್ಲ ನನ್ನಾಕಳಿಕೆಗೆ ನಿದ್ದೆ ಹೊಡೆಯುತ್ತಿದ್ದವು. ಏಳೆಂಟು ಪುಸ್ತಕಗಳು ಓದೋಣವೆಂದು ಪ್ರಯತ್ನಿಸಿದರೂ ಆಗಲಿಲ್ಲ. ಒಂದೆರೆಡು ಪುಟಗಳೊದುವುದರಲ್ಲಿಯೇ ಪುಟ ಮಡಚಿಟ್ಟು ಇವೆಲ್ಲ ಇಂಟರೆಸ್ಟ್ ಹುಟ್ಟಿಸದ ಪುಸ್ತಕಗಳೆಂದು ಸುಮ್ಮನೆ ಚಾಪ್ಲಿನ್ ಓದುತ್ತಾ ಕೂತೆ. ಒಂದೇ ಉಸಿರಿಗೆ ನನ್ನೊಳಗೊಬ್ಬ ಚಾಪ್ಲಿನ್ ಪ್ರವೇಶಿಸಿದ.

ಲಂಡನಿನ ಯಾವುದೋ ಕೊಳಚೆಯಲ್ಲಿ, ಬಡ ಕುಟುಂಬದಲ್ಲಿ ಹುಟ್ಟಿದ ಚಾಪ್ಲಿನ್ ಮುಂದೊಂದು ದಿನ ಇಡೀ ಜಗತ್ತಿನಲ್ಲಿಯೇ ಹೆಚ್ಚು ವೆಚ್ಚವುಳ್ಳ ದ್ವೀಪವೊಂದಕ್ಕೆ ಹೋಗಿ ಇದ್ದು ಬರುತ್ತಾನೆ. ಚಾಪ್ಲಿನನ ಬದುಕೆ ಒಂದು ವಂಡರಫುಲ್ ಜಗತ್ತು. ಅಪ್ಪನ ಪ್ರೀತಿಯಿಲ್ಲದ, ದಿನವೂ ಊಟದ ಕನಸು ಕಾಣುತ್ತಲೆ ಮಲಗುವ ಚಾರ್ಲಸ್ ಸ್ಪೆನ್ಸರ್ ಚಾಪ್ಲಿನ್ ಮುಂದೊಂದು ದಿನ ಶ್ರೇಷ್ಠ ನಟನಾಗಬಹುದೆಂದು ಅವನು ಓಡಾಡಿದ ಬೀದಿಗಳು ಸಹ ಊಹಿಸಿರಲಿಕ್ಕಿಲ್ಲ.

ನೋವು, ಹಸಿವು , ಅವನವ್ವಳಿಂದ ಬಂದ ರಂಗಭೂಮಿ ನಂಟು ಇವುಗಳೆಲ್ಲ ಚಾಪ್ಲಿನನ್ನು ರೂಪಿಸಿದವು. ತೇಜಸ್ವಿಯಂತಹ ಕ್ರೀಯಾಶೀಲ ಮನುಷ್ಯರನ್ನು ನೋಡಿದಾಗ ನಾವೆಲ್ಲ ಎಷ್ಟು ನಿರುಪಯುಕ್ತವಾಗಿ ಕಾಲ ಹರಣ ಮಾಡುತ್ತಿದ್ದೆವಲ್ಲ ಎನಿಸುತ್ತದೆ. ಚಾಪ್ಲಿನ್ ಸಹ ಹಾಗೇ ಸದಾ ಏನಾದರೊಂದು ಮಾಡುತ್ತಿರುವ ಕಿತಾಪತಿಯ ಮನುಷ್ಯ.

ಕುಂವೀಯವರ ಅದ್ಭುತ ಬರವಣಿಗೆ ಶೈಲಿ ಚಾಪ್ಲಿನನ್ನು ಇಲ್ಲೆಲ್ಲೋ ನಮ್ಮೆದುರೆ ಬೆಳೆಯುತ್ತಿರುವ, ಬೆಳೆದ ಮನುಷ್ಯನೊಬ್ಬನಂತೆ ಪರಿಚಯಿಸುತ್ತದೆ. ಚಾಪ್ಲಿನ್ ನಿರ್ಮಿಸಿದ ಚಿತ್ರಗಳ ಹಿಂದಿನ ಪ್ರೇರಕತೆಯೇ ಅವನ ಬದುಕು. ಅವನು ಈ  ಬದುಕನ್ನು ನೋಡುವ ರೀತಿ, ಇವುಗಳೆಲ್ಲ ನಮಗೆ ಆಶ್ಚರ್ಯ ಮತ್ತು ಮೆಚ್ಚುಗೆಗಳು ಸೂಚಿಸುತ್ತದೆ. ಚಾಪ್ಲಿನ್ ಒಮ್ಮಿಂದೊಮ್ಮೆಲೆ ಬೆಳೆದು ನಿಂತವನಲ್ಲ. ಅವನು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು ದೊಡ್ಡವು ಅವುಗಳೆ ಅವನನ್ನು ಇನ್ನೂ ಎತ್ತರಕ್ಕೆ ಬೆಳಸಿದವು.

ಕುಂವೀಯವರ ಈ ಪುಸ್ತಕ ಅದ್ಬುತ ಕಾದಂಬರಿಯೊಂದು ಓದಿದಂತಹ ಅನುಭವ ನೀಡುತ್ತದೆ.  " ತಮ್ಮ ಕಷ್ಟಸುಖಗಳಿಗೆಂದೂ ಆಗದೆ ಪರಕೀಯರಂತೆ ಉಳಿದು ಬಿಡುವ ಜನರ ಅಭಿಪ್ರಾಯದ ಕಡೆ ಕಿವಿ ಚಾಚಬಾರದೆಂದು "  ಚಾಪ್ಲಿನ್ ತಾಯಿ ತನ್ನ ಮಗನಿಗೆ ಬಾಲ್ಯದಲ್ಲಿಯೇ ಬುದ್ದಿ ಹೇಳುತ್ತಾಳೆ. ಸ್ಕೂಲ್ ತಪ್ಪಿಸಿಕೊಂಡು ಹಸಿದ ಹೊಟ್ಟೆಯಲ್ಲಿ ಗೊಂಬೆ, ಬಲೂನುಗಳು ಮಾರುತ್ತ ಚಾಪ್ಲಿನ್ ಬಾಲ್ಯವನ್ನು ಕಳೆದ.

ಮಗುತನ ಮತ್ತು ತನ್ನನ್ನು ತಾನೇ ಲೇವಡಿ ಮಾಡಿಕೊಳ್ಳುವ ಗುಣದಿಂದ ಚಾಪ್ಲಿನ್ ಎತ್ತರಕ್ಕೆ ಬೆಳೆದ. ಮಕ್ಕಳು ಮತ್ತು ನಾಯಿಗಳಿಂತ ಅದ್ಭುತ ನಟರಿಲ್ಲವೆಂದು ಅವ ಹೇಳುತ್ತಿದ್ದ. ನಿರಕುಂಶಾಧಿಕಾರವನ್ನು ವಿರೋಧಿಸಿದ. ಒಬ್ಬ ಕಲಾವಿದನಾಗಿ ರಾಜಕೀಯ ಅಂಶಗಳಿಗೆ ಸ್ಪಂದಿಸುತ್ತಿದ್ದ. ಐನಸ್ಟೈನ್ ಸೇರಿದಂತೆ, ಕವಿಗಳು, ಸಾಹಿತಗಳ ಜೊತೆ ಗಾಢಸಂಪರ್ಕವನ್ನು ಚಾಪ್ಲಿನ್ ಹೊಂದಿದ್ದ. ಪುಸ್ತಕದಲ್ಲಿ ಇಡೀ ಚಾಪ್ಲಿನಿನ ಕಥೆಯೇ ಇದೆ...

ಒಂದು ಸಣ್ಣ ಕಲ್ಪನೆಯ ಮೇಲೆ ಅವ ಬಿಡಿಸುತ್ತ ಹೋಗುವ ಚಿತ್ರಕಥೆಗಳು, ಹಾಸ್ಯದ ಮೂಲಕವೇ ಗಂಭೀರವಾದದ್ದನನ್ನು ತಾನು ಹೇಳಬೇಕೆಂದುಕೊಂಡಿರುವುದನ್ನು ಹೇಳುವ ಅದ್ಭುತ ಶಕ್ತಿ ಅವನೊಳಗಿತ್ತು. 

ಚಾಪ್ಲಿನ್ ಹಲವು ಕಾರಣಕ್ಕೆ ನನಗ ಅಳಸಿದ, ನನ್ನ ಕುರಿತು ನಾನೇ ಅಸಹ್ಯಪಟ್ಟುಕೊಳ್ಳುವಂತೆ ಮಾಡಿದ, ಅನಾಥವಾಗಿ ಬೀದಿಯಲ್ಲಿ ನಡೆಯುವವನಿಗೆ ಕೈಹಿಡಿದ. ಅವನೊಳಗಿನ ಸೃಜನಶೀಲತೆಯ ಚಿತ್ತಾರ ಸೆಳೆದು ಕಾಡಿಸುತ್ತಿದೆ. ನಮ್ಮ ಮುಂದೆ ನಗುವ, ನಗಿಸುವ ಚಾಪ್ಲಿನ್ ಕಣ್ಣೀರಿನ ಸಮುದ್ರವನ್ನೇ ಬೆನ್ನಿಗೆ ಕಟ್ಟಿಕೊಂಡಿದ್ದಾನೆ. ಚಾಪ್ಲಿನ್ ನಮಗೂ ಸ್ಪೂರ್ತಿಯಾಗುತ್ತಾನೆ. ಇಷ್ಟೆಲ್ಲ ಅವಕಾಶಗಳಿದ್ದು ನಮ್ಮೊಳಗಿನ ನಿರುತ್ಸಾಹಕ್ಕೆ ಕನ್ನಡಿ ಹಿಡಿದು ಮಾತಾಡಿಸುತ್ತಾನೆ...

# ಕಪಿಲ ಪಿ. ಹುಮನಾಬಾದೆ.
6-2-2019

Wednesday 15 April 2020

ಬಿದಿರು( ಸಣ್ಣಕಥೆ) - ಕಪಿಲ ಪಿ ಹುಮನಾಬಾದೆ.

                  ಬಿದಿರು

ಪೋರ್ಟಿಕೊದ ಆರಾಮ ಚೇರಲ್ಲಿ ಬೆನ್ನು ಒತ್ತಿ ಕೂತ ಗಂಗಾಧರನ ಕೈಯಿಂದ ಪುಸ್ತಕವೊಂದು ಟಪ್ ಎಂದು ನೆಲದ ಮೇಲೆ ಬಿದ್ದಾಗಲೇ ಎಚ್ಚರವಾಯ್ತು. ಪುಸ್ತಕದ ರಟ್ಟಿನ ತುದಿ ಛಿದ್ರವಾಗಿದ್ದಕ್ಕೆ ಬೇಸರದಿಂದಲೆ ಅದನ್ನೆತ್ತಿ ತೊಡೆಮೇಲೆ ಇಟ್ಟುಕೊಂಡು, ಮನೆ ಮುಂದಿನ ಗಾರ್ಡನಿನಲ್ಲಿ ಬೆಳೆದು ನಿಂತ ದಟ್ಟ ಬಿದಿರು ನೋಡುತ್ತ ಕೂತ. ಅವ ದಿಟ್ಟಿಸುತ್ತ ಹೋದಂತೆ ಅವನ ಕಣ್ಣೆದುರೆ ರಭಸವಾಗಿ ಬಿದಿರು ಬೆಳೆಯುತ್ತಿದ್ದವು. ಇಲ್ಲಿ ಮನೆ ಕಟ್ಟಿ ಐದಾರು ವರ್ಷವಾಗಿರಬಹದು ಆವಾಗಿನಿಂದ ಇವು ಬೆಳೆಯುವುದು ನಿಲ್ಲಿಸಿಲ್ಲ. ಅವುಗಳ ಗುಂಪು ಎಂದಿಗಿಂತ ಇವತ್ತು ಅವನನ್ನು ತುಸು ಜೋರಾಗಿಯೇ ಸೆಳೆಯುತ್ತಿತ್ತು. ಉದ್ದವಾದ ಬೊಂಬುಗಳಂತೆ ಎದ್ದುನಿಂತಿರುವ ಹಸಿರು ಬಿದುರಿನ ಗಿಡಗಳು ಕೈಬೀಸಿ ಕರೆಯುತ್ತಿದ್ದವು. ಅವುಗಳ ಮೇಲೆ ಕುಂತು ಚಿಂವ್ ಚಿಂವ್ ಮಾಡುತ್ತಿರುವ ಪುಟ್ಟ ಗುಬ್ಬಿಗಳು, ಗಾಢಹಸಿರಿನ ಗಿಳಿಗಳು ಕಣ್ಣು ಅತ್ತಿತ್ತ ತಿರುಗಿಸುತ್ತ ಏನೋ ಹುಡುಕುತಿದ್ದವು. 
ಗಂಗಾಧರನ ಹತ್ತು ವರ್ಷದ ಮಗಳು ಜೀನವನ್ಮುಖಿ  ಯೇ ಅಪ್ಪ ನೀ ಇಲ್ಲಿ ಕುಂತಿದಿಯಾ?! ನಿನಗೆ ಮನೆ ತುಂಬಾ ಹುಡುಕದೆ, ಚಹಾ ತಗೋ ಎಂದು ಹೇಳಿದಾಗಲೆ ಅವನು ಬಿದುರು ಗಿಡಗಳಿಂದ ಹೊರಬಂದ.
ಮಗಳ ಅಕ್ಕಿಯಂತಹ ಹಲ್ಲುಗಳು, ಎಳಿ ಕೈಕಾಲುಗಳು, ಅವಳು ಉಟ್ಟಿದ್ದ ಪುಟ್ಟ ಲಂಗ, ಅವಳ ಕೂದಲಿಗೆ ಕಚ್ಚಿಕೊಂಡ ಪಿನ್ನು, ಹಣೆ ಮೇಲೆ ಜಾರಿ ಬೀಳುತಿದೆಯೇನೋ ಅನ್ನುವಂತಹ ನೀರಿನ ಸಣ್ಣ ಚುಕ್ಕಿಯಂತಹ ಸ್ಟಿಕರ್ ಹಚ್ಚಿಕೊಂಡು ಚಹಾ ಕೈಯಲ್ಲಿ ಹಿಡಿದುಕೊಂಡು ನಿಂತಿದಳು. 
ಅಪ್ಪ ಕೈಸುಡಲತದ ಫಸ್ಟ್ ಚಹಾ ತೊಗೊರೋ ಎಂದಾಗಲೇ ಅವಳನ್ನು ದಿಟ್ಟಿಸುವುದು ಬಿಟ್ಟ. ಮನೆಯಲ್ಲಿ ಈಗ ಒಂದು ವಾರವೇ ಆಯ್ತು ಇವನು ಬದಲಾಗಿ. ನಡುರಾತ್ರಿವರೆಗೂ ಸಿಗರೇಟ್ ಸುಡುತ್ತ ಕಣ್ಣು ತೆರೆದು ರಾತ್ರಿ ನೋಡುತ್ತಿದ್ದ. ಹಗಲು ಅವನಿಗೆ ನುಂಗುತಿರುವಂತೆ ಅನಿಸುತ್ತಿತ್ತು. ಹೆಂಡತಿ ಪಕ್ಕದಲ್ಲಿ ಮಲಗುವುದನ್ನು ಬಿಟ್ಟಿದ್ದ. ಅವಳು ಎಷ್ಟೇ ಬೈದರೂ, ಏನೇ ಕೇಳಿದರು ನನಗೆ ಏನು ಸಂಬಂಧವೇ ಇಲ್ಲವೆಂಬಂತೆ ಇರುತ್ತಿದ್ದ. ತಾನಾಯ್ತು ತನ್ನ ಪುಸ್ತಕಗಳಾಯ್ತು ಇಷ್ಟೇ ಅವನ ಬದುಕು ಆಗಿತ್ತು.
ಮನೆಗೆ ಬಂದವರೆದುರು ಗಂಗಧಾರನ ಹೆಂಡತಿ ಹೇಳುವುದು ಒಂದೇ ಮಾತು  ನಿನ್ನೆ ಮೊನ್ನೆವರೆಗೂ ಎಲ್ಲಾ ಆರಾಮ ಇದ್ರು, ಯಾವಾಗ ಅವರ ಊರಿಗಿ ಹೋಗಿ ಬಂದ್ರೊ ಆವಾಗಿನಿಂದ ಹಿಂಗ ಆಗ್ಯಾರ ಅಂತ ಹೇಳುತ್ತಿದ್ದಳು.
 ಡಿಗ್ರಿ ಕಾಲೇಜೊಂದರಲ್ಲಿ ಲೈಬ್ರರಿಯನ್ ಆಗಿರುವ ಗಂಗಧಾರನಿಗೆ, ಪುರುಸೊತ್ತು ಎಂಬುವ ಪದದ ಅರ್ಥವೇ ಗೊತ್ತಿಲ್ಲದಂತಿರುವ ಮನುಷ್ಯ ಒಮ್ಮಿಂದೊಮ್ಮೆಲೆ ಹೀಗೆ ಮುದುಡಿ ಹೋಗಿರುವ ಅವನ ಬಗ್ಗೆ ಹೆಂಡತಿಗಂತೂ ಹೇಳಲಾಗದ ಏನೇನೋ ಯೋಚನೆಗಳು ಕುಕ್ಕುತಿದ್ದವು.
ಪೋರ್ಟಿಕೊದಲ್ಲಿ ಒಂದೊಂದು ಸಲ ಕಾಲೇಜಿಗೆ ಹೋಗದೆ ಪುಸ್ತಕ ಓದುತ್ತ ಕುಂತು ಬಿಡುತ್ತಿದ್ದ. ಅವ ಒಂದು ತಿಂಗಳಿಂದ ಒಂದೇ ಪುಸ್ತಕ ತಿರುಗಿ ತಿರುಗಿ ಓದುತ್ತಿದ್ದ. ಆ ಪುಸ್ತಕ ಯಾಕೆ ಅವ ಅಷ್ಟು ಸಾರಿ ಓದುತ್ತಿದ್ದಾನೋ ಯಾರಿಗೂ ಗೊತ್ತಾಗಲಿಲ್ಲ. ಮನೆಮುಂದಿನ ಬಿದಿರುಗಳ ಬುಡದಲ್ಲಿ ಹೋಗಿ ನಿಂತು ಒಂದು ಪ್ಯಾಕ್ ಫುಲ್ ಸಿಗರೇಟ್ ಸೇದಿ ಬರುತ್ತಿದ್ದ.
ಕೂತಲ್ಲಿಂದ ಎದ್ದವನೆ ಎಂದಿನಂತೆ ಬಿದಿರುಗಳ ಗುಂಪಿನತ್ತ ನಡೆದ. ಅಲ್ಲೊಂದು ಹಸಿರು ಬಟ್ಟೆಯ ಚಿಂದಿ ಅವುಗಳಿಗೆ ಜೋತು ಬಿದ್ದಿತ್ತು. ಅದನ್ನು ಎಷ್ಟು ನಾಜೂಕಾಗಿ ಎಳೆದರು ಪರ್ ಅಂತ ಹರಿದೆ ಹೊಯ್ತು. ಅದರ ಕೆಳಗೆ ಕುಂತವನೆ ಗಳಗಳನೆ ಅತ್ತ. ಯಾರೂ ನೋಡಿಲ್ಲವೆಂದು ತುಸು ಖಾತ್ರಿ ಪಡಿಸಿಕೊಂಡು ಎದ್ದು ನಿಂತ. ಅವನ ಅಳುವಿಗೆ ಯಾವ ಕಾರಣವಿರಬಹುದೆಂದು ಅವನೊಬ್ಬನಿಗೆ ಮಾತ್ರ ಗೊತ್ತಿತ್ತು.
ಒಂದುವಾರದ ಹಿಂದೆ ಇವನ ಆತ್ಮೀಯ ಬಾಲ್ಯದ ಗೆಳೆಯ ದಿನೇಶ್ ಪೋನ್ ಮಾಡಿದ್ದ ಲೇ ಫ್ರೀ ಇದಿಯೇನೊ, ಒಂದ ಅರ್ಜಂಟ್ ಮಾತ ಹೇಳದದ. ನೀ ಗಾಭರಿ ಆಗಬ್ಯಾಡ, ಸಮಾಧಾನನಿಂತ ಕೇಳು 'ನಿಮ್ಮ ಮನಿ ಬಾಜುದ ಮೀನಾ ಸತ್ತಾಳ ಲೇ, ವಿಷ ತಗೊಂಡ ಎಂದ. ಆ ಕಡೆಯಿಂದ ಧ್ವನಿ ಬರುತ್ತಿದ್ದರೂ ಇವ ಏನನ್ನೂ ಮಾತಾಡದೆ ಪೋನ್ ಕೆಳಗಿಳಿಸಿ ಜೇಬಲ್ಲಿ ಇಟ್ಟುಕೊಂಡ. ಕಾರ್ ಸ್ಟಾರ್ಟ ಮಾಡಿ ಊರಿನ ದಾರಿ ಹಿಡಿದ. ಅಳು ಒಳಗಿನಿಂದ ಚೆಲ್ಲುತಿತ್ತು. ಹೇಗೊ ಸಂಭಾಳಿಸಿಕೊಂಡು ಕಾರು ಓಡಿಸುತ್ತಿದ್ದ. ಹೊರಗಡೆಗೆ ಕಾರಿನ ಗ್ಲಾಸಿನ ಮೇಲೆ ಬೀಳುತ್ತಿದ್ದ ಮಳೆ ನೀರು ರ್ಯಾಪರ್ ಒರೆಸುತ್ತಿತ್ತು. ಇವ ಬೆವರಿನಿಂದ ತೊಯ್ದು ಹೋಗಿದ್ದ. ದಿನೇಶ್ ಪೋನಿನಲ್ಲಿ ಹೇಳಿರುವ ಮೀನಾ ಇವನ ಆತ್ಮೀಯ ಹೈಸ್ಕೂಲ್ ಗೆಳತಿ. ಅವಳು ದೊಡ್ಡವಳಾದ ಮೇಲಿನಿಂದ ಇವನಿಗೆ ಅವಳ ಮೇಲೆ ವಿಶೇಷ ಆಸಕ್ತಿ.  ಅವಳು ಮದುವೆ ಆಗಿ ಹೋಗುವವರೆಗೂ ಅವಳೊಂದಿಗೆ ಎಲ್ಲಾ ರೀತಿಯ ಸಂಪರ್ಕಗಳು ಹೊಂದಿದ್ದ. ಅವರಿಬ್ಬರೂ ಹೊಲದ ಬಣಮಿಗಳ ಮರೆಯಲ್ಲಿ ಎಷ್ಟೋ ಸಲ ಕೂಡಿದ್ದರು. ಅದೆಲ್ಲ ಗಂಗಾಧರನಿಗೆ ಮೊದಮೊದಲ ಪುಳಕಗಳು. ಇವ ಎಲ್ಲಾ ಹುಡುಗರಂತೆ ಸಿಟಿ ಸೇರಿಕೊಂಡು ಓದಿಗಿಳಿದ. ಅವಳ ಮದುವೆ ಆಗಿ ಹೋದಳು. ಇದಾದ ಮೇಲೆ ಅವರಿಬ್ಬರಿಗೂ ಸಂಪರ್ಕವೆ ಇಲ್ಲ. ಅವ ಆಗಾಗ ಹಳೆ ನೆನಪುಗಳಲ್ಲಿ ಮರುಗುತ್ತಿದ್ದನಾದರೂ ಬೆಳೆದಂತೆ ಬದಲಾಗುತ್ತ ನಡೆದ. 
ಕುಡುಕ ಗಂಡನ ದೆಸೆಯಿಂದ ಮೀನಾ ವಿಷ ಕುಡಿದಿದ್ದಳು. ಹೆಣ ಗೋಡೆಗೊರಗಿಸಿ ಕೂಡಿಸಿದ್ದರು. ಇವ ಒಮ್ಮಿಂದೊಮ್ಮೆಲೆ ಹೀಗೆ ಪ್ರತ್ಯಕ್ಷವಾಗಿರುವುದಕ್ಕೆ ಊರಲ್ಲಿ ಯಾರು ಖುಷಿಪಡಲಿಲ್ಲ. ಅವರಿಬ್ಬರ ಮಧ್ಯೆ ಇದ್ದ ಹಳೆ ಸಂಬಂಧಗಳು ಸಹ ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅವನ ಗೆಳೆಯ ದಿನೇಶನಿಗೆ ಬಿಟ್ಟು. 
'ಇದೇನೆ ಯವ್ವಾ ಅಪೆಸಿ ಬಂದು ಅಂಗಳಾಗ ನಿಂತದ ಅಲಾ' ಎಂದು ಜನ ಮಾತಾಡಿಕೊಂಡರು.
ಮೀನಾಳ ಮುಖಕ್ಕೆ ಬಿಳಿ ಬಟ್ಟೆ ಸುತ್ತಿದ್ದರು. ಆಗತಾನೆ ಮೈತೊಳೆದು ಕೂಡಿಸಿರಬಹುದು ಕೆಂಪು ಸೀರೆ ಉಡಿಸಿದ್ದರು. ಅವಳ ಮುಂದೆ ಅವಳವ್ವ ಜೋರಾಗಿ ಅತ್ತು ಅತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅವಳ ಅಪ್ಪ ಅಂಗಳದಲ್ಲೆ ಬೀಡಿ ಸೇದುತ್ತ ಕಣ್ಣು ತುಂಬಾ ನೀರು ತುಂಬಿಕೊಂಡಿದ್ದ. ಅವಳ ಜೀವವಿಲ್ಲದ ಮುಖ ನೋಡಿದ ಗಂಗಾಧರನಿಗೆ ವಾಕರಿಗೆ ಬಂದ ಹಾಗಾಯ್ತು. ಈ ತುಟಿಗಳಲ್ಲವೆ ನಾ ಧೀರ್ಘವಾಗಿ ಮುತ್ತಿಟ್ಟದ್ದು. ಕಪ್ಪು ಬಿದ್ದ ಈ ಕೆನ್ನೆಗಳ ಮೇಲೆ ಅಲ್ಲವೆ ನಾ ಮಲಗಿ ಮುದ್ದಾಡಿದು. ಅವಳ ಸೆಟದು ನಿಂತಿರುವ ಒಣ ಕಟ್ಟಿಗಿಯಂತಹ ಕೈಗಳೆ ಅಲ್ಲವೆ ನನ್ನ ಕೂದಲು ಸುರುಳಿ ಸುತ್ತಿ ಆಟವಾಡಿದ್ದು. ಗಂಗಾಧರ ಯೋಚಿಸುತ್ತ ಹೋದಂತೆ ಒಳಗೊಳಗೆ ಪುಡಿಪುಡಿಯಾಗುತ್ತ ಕುಸಿಯುತಿದ್ದ. ಅವಳ ಹೆಣ ಎತ್ತಲು ಮಾಡಿದ ಬಿದಿರು ಕುರ್ಚಿ ಅವನನ್ನು ಕರೆಯುತಿರುವಂತೆ ಭಾಸವಾಗುತ್ತಿತ್ತು. ಅದಕ್ಕೆ ನಯವಾಗಿ ಜೋಡಿಸಿದ ಸಣ್ಣ ಬಿದರಿನ ತುಂಡುಗಳ ಸಿಬಿರು ಅವನ ಮೈಯಲ್ಲ ಚುಚ್ಚುತ್ತಿದ್ದವು. ಅದರ ಸುತ್ತ ನಿಂತ ಯುವಕರು ಅದನ್ನು ಸಪ್ಪೆ ಮುಖ ಮಾಡಿಕೊಂಡು ನೋಡುತ್ತಿದ್ದರು. ಅವಳ ಹೆಣ ನೋಡಿದವನಿಗೆ ಇಷ್ಟು ದಿನ ಎಲ್ಲಿದ್ದವೋ ಏನೋ ಆ ಕಣ್ಣೀರುಗಳು, ಗಳಗಳನೆ ಅತ್ತ. ಊರ ಮಂದಿ ದಂಗು ಆಗಿ ಹೋದರು.
ಗಂಗಾಧರ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದ.  ಅವನನ್ನು ಎತ್ತಿ ಅಂಗಳದಲ್ಲಿ ಕೂಡಿಸಿ ಮೂಗಿನಲ್ಲಿ ಬೀಡಿಯ ಖಾಟ್ ನೀಡುತ್ತಿದ್ದರು. ಪಾದಗಳು ಜೋರಾಗಿ ಉಜ್ಜಿದರು. ಬೇಹೊಸ್ ಬಿದ್ದಿದ್ದ ಗಂಗಾಧರ ಮಿಸುಕಾಡುವಂತೆ ಕಾಣಲಿಲ್ಲ. ಅವನ ಸುತ್ತ ನೆರದಿದ್ದ ಮಂದಿಗೆಲ್ಲ ಸರಿಸಿ ಗಾಳಿಗೆ ಜಾಗ ಬಿಟ್ಟರು. ಗಂಗಾಧರ ಮೆಲ್ಲಗೆ ಎಚ್ಚರಗೊಂಡು ಮೂಲೆಯಲ್ಲಿ ಕೂತ. ಅಂಗಳದ ತುಂಬಾ ಕಣ್ಣಾಡಿಸಿದ ದಿನೇಶನ ಸುಳಿವೆ ಕಾಣಲಿಲ್ಲ. ಒಂದಿಬ್ಬರೂ ಮುದುಕಿಯರು ಹೆಣದ ಮುಂದೆ ಕುಂತು ಕಥೆ ಹೇಳಿ ಹಾಡಿ ಹಾಡಿ ಅಳುತ್ತಿದ್ದರು. 
ಹೋದ ವರ್ಷವೆ ಇರಬಹುದು. ಗಂಗಾಧರನ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ಸತ್ತಾಗ. ಊರಿಂದ ಬಂದಿದ್ದ ಗಂಗಾಧರ ಒಂದು ಹನಿ ಕಣ್ಣೀರು ಸಹ ಹಾಕಿರಲಿಲ್ಲ. ಇವನ ಅಕ್ಕ ಕೊಳ್ಳಿಗೆ ಬಿದ್ದು ಅಳುವಾಗ  ಯಾವ ಪ್ರತಿಕ್ರೀಯೆ ತೋರಿಸದೆ ಅವಳಿಗೆ ತುಸು ಸಮಾಧಾನ ಮಾಡಿ. ಸುಮ್ಮನೆ ಕಲ್ಲು ಕಂಬದಂತೆ ನಿಂತಿದ್ದ. 
ಅವನಪ್ಪನ ಹೆಣ ಎತ್ತಲು ತಂದ ಬಿದಿರು ಕುರ್ಚಿ ನೋಡಿ ಒಳಗೊಳಗೆ ಎಷ್ಟು ಚಂದ ಹೆಣೆದಿದ್ದಾರೆ ಎಂದುಕೊಂಡು ಅದು ತಂದವರಿಗೆ ಒಂದಿಷ್ಟು ಹೆಚ್ಚಿಗೆ ದುಡ್ಡು ಕೊಟ್ಟು ಕಳಿಸಿದ. ಅವನ ಜೊತೆ ಬಂದಿದ್ದ ಗೆಳೆಯರಿಗೆ ಅದರ ವಿಶೇಷತೆಗಳೆಲ್ಲ ವಿವರಿಸಿ ಹೇಳುತ್ತಿದ್ದ. ಇವನ ಜೊತೆ ಬಂದವರೆ ಇವನ ಮಾತುಗಳಿಂದ ತಪ್ಪಿಸಿಕೊಳ್ಳಲು ತಲೆ ತಗ್ಗಿಸಿ ನಿಂತಿದ್ದರು. ಒಂದಿಬ್ಬರೂ ಬೀಡಿ ಸೇದುತ್ತ ನಿಂತ ಮುದುಕರು, ಆ ಕುಚರ್ಿಯ ವಿಶೇಷತೆಗಳಲ್ಲಿ ಇಲ್ಲದ್ದು ಇದ್ದಿದ್ದು ಎಲ್ಲಾ ಸೇರಿಸಿ ಗಂಗಾಧರನೆದುರು ಕೊರೆಯುತ್ತಿದ್ದರು. ಇವ ಏನೋ ಅದ್ಭುತವಾದದ್ದು ಕೇಳಿಸಿಕೊಳ್ಳುತ್ತಿರುವಂತೆ, ಅವರನ್ನು ದೇವಧೂತರಂತೆ ನೋಡುತ್ತಿದ್ದ.
ಆವತ್ತು ಊರಿನ ಹಳೆ ಮುದುಕಿಯೊಂದು ಯಾರದೋ ಕಿವಿಯಲ್ಲಿ ಮೆಲ್ಲಗೆ ಊಸುರುತ್ತಿದ್ದಳು  ಇವ ನಮ್ಮ ಗಂಗ್ಯಾ ಮೊದಲಿಂದ ಹಿಂಗೆ ಅದ ಪಾರ, ತನ್ನ ಜೀವ ಛೋಲೋ ಇದ್ರ ಸಾಕ ಅಂತದ, ಅವರ ಮುತ್ಯಾ ಸತ್ತಾಗ ಒಂದು ಗೆಣ ಇತ್ತ ನೋಡ ಪಾರ, ಅವರ ಮುತ್ಯಾಂದ ಹೆಣ ಅಂಗಳಾಗ ಹೊರಸಿನ ಮ್ಯಾಲ ಮಲಗಿಸಿರು, ಈ ಗಂಗ್ಯಾ ಏನ ಜಿದ್ದಿಗಿ ಬಿತ್ತು ಅಂತಿ, ಆವತ್ತ ನನಗ ಅನ್ನ ಬೇಕಂದರ ಬೇಕು ಅಂತ ಅಂಗಳದಾಗ ನೆಲ ತಿಕ್ಕಾಡಿ ಅಳಲತಿತು ನೋಡ. ಆವತ್ತು ಅಲ್ಲಿ ಇದ್ದ ನಾನೇ ಹೇಳದೆ  ಇವತ್ತ ಕುಣ್ಯಾಗ ಒಯ್ದು ಇಡೋ ಹೆಣದ ಸಲ್ಯಾಕ ಎಳಿ ಪಾರಂದ ಹೊಟ್ಟಿ ಯಾಕ ಸುಡತರಿ ಅನ್ನ ಮಾಡ ಹಾಕರಿ ಅಂದೆ.  ಈ ಪಾರ ಆಗ ಅವರ ಮುತ್ಯಾನ ಹೆಣದ ಕಾಲಬಲ್ಲೆ ಕುಂತ ಉಣ್ಣುತು ನೋಡ. ಊರ ಮಂದಿ ಎಲ್ಲಾ  ಆ ಪರಮಾತ್ಮ ಆಡಸದಂಗ ಅದ ಅಂತ ಹೇಳಿ ಸುಮ್ಮನಾದರು.
'ಈಗ ಇಷ್ಟು ದೊಡ್ಡ ಕೋಣ ಆಗ್ಯಾದ ಸ್ವಂತ ಅಪ್ಪನ ಹೆಣದ ಮುಂದ ನಾಕ ಹನಿ ಅಳಬಾರದ' ಅಂತ ಅಜ್ಜಿ ಮಾತಾಡಿಕೊಂಡಿತು.
ಅವರಪ್ಪನ ಮಣ್ಣು ಆದಮೇಲೆ ಮರುದಿನ ದಿನೇಶ್ ಕೇಳದ  ಯಾಕಲೇ ನಿನೌವನ ನಿಮ್ಮಪ್ಪನೆದುರು ನಾಲ್ಕ ಹನಿ ಅಳಲಿಲ್ಲ ಅಲ್ಲೊ?
'ಯಾಕೋ ಏನೋ ಅಳುನೆ ಬರಲಿಲ್ಲ ಎಂದ ಗಂಗಾಧರ.
ಅಪ್ಪನ ಮುಂದೆ ಅಳಲಾರದವ ಇವತ್ತು ಮೀನಾ ಹೆಣದ ಮುಂದ ಅತ್ತಾನ ಅಂದರ ಏನದ ಇದರ ಒಳಗಿಂದ ಮಾತು ಎಂದು ತಿಳಿದುಕೊಳ್ಳಬೇಕೆನ್ನುವ ಕೆಟ್ಟ ಕುತೂಹಲ ದಿನೇಶನಿಗೆ ಸೇರಿದಂತೆ ಊರಿನವರಿಗೂ ಇತ್ತು. ಮೀನಾ ಮಣ್ಣು ಮಾಡಿದ ಮರುದಿನವೇ ದಿನೇಶ ಹೆಗಲಿಗೊಂದು ಬ್ಯಾಗ್ ಎರಿಸಿಕೊಂಡು ಸಿಟಿಗೆ ಹೋಗಿ ಗಂಗಾಧರನ ಮನೆ ಹಾದಿ ಹಿಡಿದ.
ಪೋರ್ಟಿಕೊದಲ್ಲಿ ಕಣ್ಣು ಮುಚ್ಚಿ ಕೂತಿದ್ದ ಗಂಗಾಧರ ಇವ ಬರುವುದು ಅವನಿಗೆ ಮೊದಲೆ ಗೊತ್ತಿದೆ ಏನೋ ಎಂಬಂತೆ ಪಕ್ಕದಲ್ಲಿ ಚೇರ್ ಕೊಟ್ಟು  ನೋಡೊ ದಿನೇಶ ನನ್ನಪ್ಪ ಸತ್ತಾಗ ಯಾಕ ಅಳಬೇಕು ಅನ್ನಸಲಿಲ್ಲವೋ ನನಗೆ ಈಗಲೂ ಗೊತ್ತಿಲ್ಲ. ಅವನ ಜೊತೆ ನೆನಪು ಭಾಳ ಇದಾವೆ ಆದರೆ ಯಾವು ಕೂಡ ಕಣ್ಣೀರು ಬರಸಲಿಲ್ಲ. ನೀ ನಮ್ಮಪ್ಪನ ಹೆಣ ನೋಡಿದ್ದಿ? ಅವನೌನ ಹೆಂಗ ಮಲಗಿದ್ದ ಹುಲಿ, ಅದೆ ಖಡಕ್ ಮುಖ ಇತ್ತು. ಹೆಂಗ ಅಳಬೇಕೊ ಅದರ ಎದುರು ?
ಮೀನಾ ಸುದ್ಧಿ ತಗೋ, ನನ್ನ ಮೈಮೇಲಿನ ಪ್ರತಿ ಕೂದಲಿಗೂ ಅವಳ ವಾಸನೆ ಗೊತ್ತದ, ಅವಳ ಮುಖ ನೋಡಿದಿ ಹೆಂಗ ಕಪ್ಪು ಆಗಿತ್ತು. ಆ ಮುಖಕ್ಕೆ ಅಲ್ವಾ ನಾ ಮುತ್ತಿಟ್ಟದ್ದು ಎಂದು ಬಿಕ್ಕಿ ಬಿಕ್ಕಿ ಅಳಲು ಫ್ರಾರಂಭಿಸಿದ.
ಅವರಿಬ್ಬರೂ ಮಾತಾಡುತ್ತ ಕೂತವರು, ಬಿದಿರಿನ ಗುಂಪು ಗಿಡಗಳತ್ತ ನಡೆದರು. ತನ್ನ ಬದುಕಿನ ಅಂತ್ಯವೆಲ್ಲ ಅವುಗಳ ಬುಡದಲ್ಲಿಯೇ ಇರುವಂತೆ ದಿನೇಶನಿಗೆ ಗಂಗಾಧರ ಅದರ ಮೈಮಾಟಗಳೆಲ್ಲ ವರ್ಣಿಸುತ್ತಿದ್ದ. ಚೂಪಾದ ಬಿದಿರೊಂದು ಹೊಟ್ಟೆಯಲ್ಲಿ ಯಾರೋ ತಿವಿಯುತಿರುವಂತೆ ಆಗಿ ರಾತ್ರಿಯಲ್ಲ ಕಣ್ಣಿಗೆ ನಿದ್ದೆಯೇ ಇಲ್ಲವೆಂದು ದಿನೇಶನಿಗೆ ಹೇಳಿ, ಬಿಕ್ಕುತ್ತ ಮಗುವಂತೆ ಅತ್ತ...


Saturday 4 April 2020

ರಾಗಿಮುದ್ದೆ ಪ್ರಬಂಧಗಳು - ಪುಸ್ತಕ ಓದು ಕಪಿಲ ಪಿ. ಹುಮನಾಬಾದೆ.

ರಾಗಿಮುದ್ದೆ ( ಪ್ರಬಂಧ ಸಂಕಲನ)- ರಘುನಾಥ ಚ.ಹ

ರಾಗಿಮುದ್ದೆ ಪ್ರಬಂಧ ಸಂಕಲನ ಮತ್ತು ನೆನಪುಗಳು!

ಮೊನ್ನೆ ಕಲಬುರ್ಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹಳೆ ಪುಸ್ತಕಗಳೆಲ್ಲ ಗುಡ್ಡೆ ಹಾಕಿಕೊಂಡು ಕೂತವನ ಅಂಗಡಿಯಲ್ಲಿ ಹಲವು ಅಪರೂಪದ ಪುಸ್ತಕಗಳು ಸಿಕ್ಕವು. ಅಲ್ಲಿ ಕಣ್ಣಿಗೆ ಬಿದ್ದ ರಘುನಾಥ ಚ.ಹ ಅವರ ರಾಗಿಮುದ್ದೆ ಪ್ರಬಂಧ ಸಂಕಲನ ತಟ್ಟನೆ ತೆಗೆದುಕೊಂಡೆ. ಇದಕ್ಕೆ ಕಾರಣ, ನಾ ಪಿಯುಸಿ ಫಸ್ಟ್ ಇಯರ್ ಇದ್ದಾಗ, ಸೀಕುಬಾಕು ಎಂದರೇನು ? ಲಕ್ಷ್ಮಣಯ್ಯ ತಮ್ಮ ಪತ್ನಿಯ ಬಳಿ ಹೇಳಿಕೊಂಡಿದ್ದ ಕೊನೆಯ ಆಸೆ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಬಾಯಿಪಾಠು ಮಾಡಿ ಸಾಕಾಗಿ ಹೋಗುತ್ತಿತ್ತು. ಸುಡು ಸುಡು ರೊಟ್ಟಿ ತಿಂದು ಗೊತ್ತಿದ್ದ ನಮಗೆ ಒಟ್ಟಾರೆ, ಎಂದಿಗೂ ನೋಡಿರದ ಈ ರಾಗಿ ಮುದ್ದೆ ಒಂದು ಅದ್ಭುತ ಕಲ್ಪನೆಯೆ ಆಗಿತ್ತು. ಪ್ರಬಂಧದಲ್ಲಿ ಜರ್ಮನಿಯಲ್ಲಿ ವಿಶ್ವಕಪ್ ಫುಟ್ಬಾಲ್ ಸಮಯದಲ್ಲಿ " ತುಟಿಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚೆಲುವೆಯರು." ಇದೊಂದೆ ಸಾಲು ಆ ಸಮಯದಲ್ಲಿ ನಮಗೆ ಸರಿಯಾಗಿ ನೆನಪಿರುತ್ತಿತ್ತು.
- ಪುಸ್ತಕ ಕೈಗೆ ಸಿಕ್ಕಿದ ತಕ್ಷಣ ಇಲ್ಲಿರುವ ೧೨ ಪ್ರಬಂಧಗಳಲ್ಲಿ ರಾಗಿಮುದ್ದೆ ಪ್ರಬಂಧ ಬಿಟ್ಟು ಉಳಿದವು ಓದಿದೆ. ಕೊನೆಗೆ ರಾಗಿಮುದ್ದೆ ಓದಿದೆ. ಎಷ್ಟೊಂದು ಹಳೆ ನೆನಪುಗಳು ಕಣ್ಣು ಮುಂದೆ ಬಂದು ಹೋದವು. ಒಂದು ಟೈಮಲ್ಲಿ  ಈ ಪ್ರಬಂಧ ಪರೀಕ್ಷೆ ದೃಷ್ಟಿಯಿಂದ ಓದಿ ವಿಪರೀತ ಕಿರಿಕಿರಿ ಅನುಭವಿಸುತ್ತದ್ದ ನಾನು, ಈಗ ಓದುತ್ತಿದ್ದರೆ ಬೇರೆಯದೆ ಲೋಕ ಕಟ್ಟಿಕೊಡುತ್ತಿವೆ.

ಇಲ್ಲಿನ ಎಲ್ಲಾ ಪ್ರಬಂಧಗಳು ನನಗೆ ನೇರವಾಗಿಯೇ ಮನಸಿಗೆ ನಾಟಿ, ಚಿಗುರೊಡೆಯುತ್ತಿವೆ. ಇಲ್ಲಿರುವ ಹಲವು ಪ್ರಬಂಧಗಳು ಹಳ್ಳಿಗಳಲ್ಲಿ ಬಾಲ್ಯ ಕಳೆದ ಯಾವ ವ್ಯಕ್ತಿ ಸಹ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವಿದೆ. ನನ್ನೂರಿನ ಮಳೆ, ತಗಡಿನ ಸಂದಿಯಲ್ಲಿ ಗೂಡು ಕಟ್ಟಿದ ಗುಬ್ಬಿ, ಕಾಲೇಜಿನಲ್ಲಿ ಇಷ್ಟವಾದ ಹುಡುಗಿ, ಮುಂಜಾನೆ ಕೈಯಲ್ಲಿ ಚೆಂಬು ಹಿಡ್ಕೊಂಡು ಬಯಲಿಗೆ ಹೋಗಿ ಕೂತು ಗೆಳೆಯರೆಲ್ಲ ಹರಟೆ ಹೊಡೆಯುತ್ತಾ ಕುಳಿತುಕೊಳ್ಳುತಿದ್ದದ್ದು, ನಮ್ಮೂರಿನಾಚೆಯ ಜಾತ್ರೆ ಅಲ್ಲಿನ ನೆನಪುಗಳು ಎಲ್ಲವೂ ಕಣ್ಮುಂದೆ ಬಂದು ಹೋದವು.

ಈ ಪ್ರಬಂಧಗಳಲ್ಲಿ ಕಟ್ಟಿಕೊಟ್ಟಿರುವ ನಗರದ ತಣ್ಣನೆಯ ನರಳಾಟದ ಚಿತ್ರಗಳು ಸಹ ಎಲ್ಲಿಯೋ ನೋಡಿರುವುದೆ ಆಗಿದೆ. ಓದಿನ, ಉದ್ಯೋಗದ ಕಾರಣಕ್ಕೆ ನಗರಕ್ಕೆ ಬಂದು ಇಲ್ಲಿ ಮೈಹೊಂದಿಸಿಕೊಂಡಿದ್ದೆವೆ. ಆದರೆ ನಮ್ಮೆಲ್ಲರ ಮನಸ್ಸು ನಾವು ಬೆಳೆದು ಬಂದ ಹಳ್ಳಿಗಳಲ್ಲಿಯೇ ಇದೆ. ಎರಡರ ಮಧ್ಯೆ ತೀವ್ರವಾಗಿ ಒದ್ದಾಡುತ್ತಿದ್ದೆವೆ. ರಾಗಿಮುದ್ದೆ ಪ್ರಬಂಧಗಳು ಓದುವಾಗ ನನ್ನ ಸುತ್ತಲಿನ ಚಿತ್ರಣಗಳಿಗೆ ಎಷ್ಟೊಂದು ಅರ್ಥಗಳಿವೆ. ಇಲ್ಲಿನ ಸಂಗತಿಗಳು ಎಷ್ಟು ವಿಸ್ತಾರವಾಗಿ ಚಾಚಿಕೊಂಡಿವೆ ಅನಿಸಿತು.

ರಾಗಿಮುದ್ದೆ ಅಷ್ಟಾಗಿ ನಮಗೆ ಪರಿಚಯವಿಲ್ಲ. ಆದರೂ ಈ ಪ್ರಬಂಧ ಓದುವಾಗ ರಾಗಿಮುದ್ದೆಯ ಮಹತ್ವ. ಅದು ಹೇಗೆ  ಶ್ರಮಿಕರ ಮಹತ್ವದ ಆಹಾರ, ಒಂದು ನಾಡಿನ ಪ್ರತೀಕ ಎಂಬುವುದು ಕಣ್ಮುಂದೆ ಬರುತ್ತದೆ.  " ಆಹಾರ ಮನುಷ್ಯಕುಲದ ಕೇಂದ್ರ ಚಟುವಟಿಕೆ ಹಾಗೂ ಸಂಸ್ಕೃತಿಯ ಬಹುಮುಖ್ಯ ಲಕ್ಷಣಗಳಲ್ಲೊಂದು" ಎಂಬ ಸಾಲು ಓದುವಾಗ ನಮ್ಮ ಕಡೆ ಮುಂಜಾನೆ ಎದ್ದ ರೈತನಿಂದ ಹಿಡಿದು, ಎಲ್ಲರಿಗೂ ಜೋಳದ ರೊಟ್ಟಿ ಬೇಕೆ ಬೇಕು ಎನ್ನುವಷ್ಟು ಹಾಸುಹೊಕ್ಕಾಗಿರುವುದು ನೆನಪಿಗೆ ಬಂತು.

ನಾಯಿ ನೆರಳು ಒಂದು ಅದ್ಭುತ ಪ್ರಬಂಧ. ಬಾಲ್ಯದಲ್ಲಿ ನಾಯಿ ಸಾಕಲು ಮಾಡಿದ ಸಾಹಸಗಳು, ಅದರ ಬೆಳವಣಿಗೆ, ದುರಂತ ಅಂತ್ಯ. ಎಲ್ಲವೂ ಸಹಜವಾಗಿ ನಿನ್ನೆ ಮೊನ್ನೆ ನಮ್ಮೊಂದಿಗೆ ಆಡುತ್ತಿದ್ದ ನಾಯಿಯ ಕಥೆಯೇನೊ ಎನ್ನುವಂತೆ ಬರೆದಿದ್ದಾರೆ. 

" ನಾಯಿಗೂ ಮಗುವಿಗೂ ಏನಾದರೂ ವ್ಯತ್ಯಾಸವುಂಟಾ ಎನ್ನುವ ಯೋಚನೆ ಬಂದದ್ದು ಇದೇ ಕಾಲದಲ್ಲಿ. ನಾಯಿಯನ್ನು ಮುದ್ದಿಸಿಬಹುದು, ಮಗುವನ್ನೂ ಮುದ್ದಿಸಬಹುದು. ಎರಡನ್ನೂ ದಂಡಿಸಬಹುದು" ಹೀಗೆ ಮುಂದುವರೆಯುವ ಈ ಹೋಲಿಕೆಯ ಸಾಲುಗಳು ನಾಯಿಯೆಷ್ಟು ಪ್ರೀತಿಪಾತ್ರವೆಂಬುವುದು ಅದರೊಂದಿಗೆ ಒಡನಾಟ ಅನುಭವಿಸಿದವನಿಗೆ ಗೊತ್ತೆಂಬುವುದು ಓದಿದವರಿಗೆ ತಿಳಿಯುತ್ತದೆ.

ಅವಳು ಅಹಲ್ಯೆ! ಇವನು ನಹುಷ!! ಪ್ರಬಂಧ ಸಂಕೀರ್ಣವಾಗಿದೆ. ಓದುಗರೆದುರು ಹಲವು ಚಿತ್ರಗಳು ಚೆಲ್ಲಿ. ಕುಕ್ಕುತ್ತದೆ. 
"ಮಹಾನಗರದ ಶಾಪಗ್ರಸ್ತ ಚಿತ್ರಗಳ ಲೆಕ್ಕ ಮುಗಿಯುವಂಥದ್ದಲ್ಲ" ಎಂದು ಹೇಳುತ್ತಲೆ ನಮ್ಮೊಂದಿಗೆ ಎಂದೋ ನಡೆದಿರುವ ಘಟನೆಗಳು ಸಹ ನೆನಪಿಗೆ ಬರುತ್ತವೆ. ಊರಿಗೆ ಹೋಗಲು ದುಡ್ಡಿಲ್ಲ. ಆಮೇಲೆ ಮರಳಿಸುತ್ತೆವೆ... ಹೀಗೆ ಕೈಚಾಚುವ ಸಂಕಟದ ಹಲವು ಮುಖಗಳು ಮತ್ತು ಇವುಗಳ ಹಿಂದೆ ಸತ್ಯವೆಷ್ಟೋ ನಾಟಕವೆಷ್ಟೋ ಎಂಬುವುದು ಬಿಡಿಸಿ ನೋಡಲಾಗದ ದರ್ದು  ಇಲ್ಲಿದೆ. " ಬಡತನ, ಸಂಕಟ, ನೋವುಗಳೆಲ್ಲ ಅವರವರು ಸೃಷ್ಟಿಸಿಕೊಂಡ ನರಕ. ಆ ನರಕಕ್ಕವರು ಅರ್ಹರು. ಅವರ ಸ್ಥಿತಿಗಾಗಿ ಯಾರೂ ಮರುಗಬೇಕಿಲ್ಲ. ಎನ್ನುವ ಮಾತು ಒಪ್ಪಲು ಎಂದಿಗೂ ಸಾಧ್ಯವಿಲ್ಲ: ಆದರೂ ಬೇಡುವ ಚಿತ್ರಗಳ ಕಂಡಾಗೆಲ್ಲ ಆ ಮಾತು ನೆನಪಾಗುತ್ತದೆ. ಟೊಳ್ಳು ವ್ಯಕ್ತಿತ್ವ ಬಯಲಾದಂತೆನ್ನಿಸಿ ದಿಗಿಲು ಕವಿಯುತ್ತದೆ"- ಈ ಸಾಲುಗಳು ಓದುವಾಗ ಹೌದಲ್ವಾ ? ನಾವು ಎಂದೋ ಹಿಂಗೆ ಅಂದುಕೊಂಡೆ. ಸಮಾಧಾನಿಸಿಕೊಂಡಿದ್ದೆವಲ್ಲ ಎಂದು ಅನ್ನಿಸುತ್ತದೆ.

ಅಧರಂ ಮಧುರಂ ಹಲವು ಕಾರಣಕ್ಕೆ ನನಗೆ ಅತ್ಯಂತ ಪ್ರಿಯವಾದ ಪ್ರಬಂಧವಾಗುತ್ತಿದೆ. ತುಟಿಗಳ ಮಿಲನದ ಮಹಾತ್ಮೆ ಹೇಳುವ ಈ ಪ್ರಬಂಧ ಅತ್ಯಂತ ಸಹಜವಾಗಿ, ಕವಿತೆಗಳ ಸಾಲಿನಿಂದ ಇನ್ನಷ್ಟು ಆಪ್ತವಾಗುತ್ತದೆ.
ಪ್ರೇಮಿಗಳ ತುಟಿಗಳಲ್ಲಿ ಆತ್ಮಗಳ ಸಮಾಗಮ- ಷೆಲ್ಲಿ

" ನಾನು ಮೊದಲ ಬಾರಿ ಸಿಗರೇಟು ಸೇದಿದ್ದು ಹಾಗೂ ಹುಡುಗಿಯನ್ನೂ ಚುಂಬಿಸಿದ್ದು ಒಂದೇ ದಿನ. ಪ್ರಥಮ ಚುಂಬನದ ನಂತರ ಸಿಗರೇಟು ಸೇದಲು ಸಮಯವೇ ಸಿಕ್ಕಿಲ್ಲ"- ಪ್ರೇಮಿಯೊಬ್ಬನ ಮಾತು.

ಈ ಪ್ರಬಂಧದಲ್ಲಿ ಲೇಖಕರು ಬರೆದಿರುವ ಆಲ್ಫ್ರೆಡ್ ಐಸೆನಸ್ಟೆಡ್ಟ್ ಕ್ಲಿಕಿಸಿದ್ದ ಚುಂಬನ ಪ್ರಸಂಗದ ಚಿತ್ರದ ಕುರಿತು ಓದಿದಾಗ ಈಗಲೂ ನಗು ಬರುತ್ತಿದೆ. ಈ ಸಾಲುಗಳೆಲ್ಲ ಉಲ್ಲೇಖಿಸುತ್ತ ಲೇಖಕರು  "ಮುತ್ತು ಪ್ರೇಮ ರೂಪಕ ಆಗಿರುವಂತೆಯೇ ಮೃತ್ಯು ರೂಪಕವೂ ಆಗಿರಬಹುದು" ಎನ್ನುತ್ತಾರೆ. ಇದಕ್ಕೆ ಹಲವು ವಿವರಣೆಗಳು ಸಹ ನೀಡಿದ್ದಾರೆ. ಆದರೂ ನಮ್ಮಂತಹ ಹುಡುಗರಿಗೆ ಸಿಗರೇಟು ಮತ್ತು ಮುತ್ತಿನ ಸಾಲು ಸದಾ ನೆನಪಿನಲ್ಲಿ ಉಳಿಯುತ್ತವೆ.

ಫ್ಲೈಓವರ್ ಪ್ರಬಂಧದಲ್ಲಿ " ಸ್ಥಾವರದ ಮೇಲಿನ ಬದುಕುಗಳು ಮಾತ್ರ ಜಂಗಮ" ಎಂದು ಹೇಳುತ್ತಲೆ. ಮಾಯವಾದ ಪಾರಿವಾಳಗಳ, ಮನುಷ್ಯರ ಬೆವರಿನ, ದುಡಿಮೆಯ ಕಥೆ ಹೇಳುತ್ತಾರೆ.

ಮಳೆ ಮೂರು ಹನಿ ಪ್ರಬಂಧ ಓದುವಾಗ ಮತ್ತೆ ಬಾಲ್ಯಕ್ಕೆ ಮರಳಿದೆ. ಅವ್ವನ ಕಣ್ತಪ್ಪಿಸಿ ಮಳೆಗಿಳಿದು ಕುಣಿದ, ಆಡಿದ ದಿನಗಳು ಈಗಲೂ ಮಾಸಿಲ್ಲ. " ಮಗುವಿನ ಅಳುವಿಗೊಂದು ಲಯವಿದೆ. ಆ ಲಯಕ್ಕೆ ಗುಡುಗು ಸಿಡಿಲುಗಳ ಪಕ್ಕವಾದ್ಯವಿದೆ. ಮಿಂಚು ಬೆಳಕಿನ ಪ್ರಭಾವಳಿಯಿದೆ. ಆಲಿ ಕಲ್ಲುಗಳು ಅಕ್ಷತೆಯಿದೆ. ಎಲ್ಲೋ ಮಗು ಅಳುತಾ ಇರುವಂತೆ ಮಳೆ ಸುರಿಯುತ್ತಿದೆ". 

"ಅಮ್ಮನ ಸೆರಗಿಗೆ ತಲೆಯೊಡ್ಡಿ, ಮಳೆನೀರನ್ನೆಲ್ಲ ಕಣ್ಣಲ್ಲಿ ಸುರಿಸುತ್ತ ಬಿಕ್ಕುತ್ತಿದ್ದೆವು"

ಈ ಪ್ರಬಂಧ ಓದುವಾಗ ನಮ್ಮೂರಿನ ಕೆಂಪು ಮಣ್ಣಿನಲ್ಲಿ ಮಳೆ ಬಿದ್ದಾಗ ಮಣ್ಣಿನಿಂದ ಬರುತ್ತಿದ್ದ ಘಮಲು ಮೂಗಿಗೆ ಬಂದು ಬಡಿಯಿತು.

ಹಲ್ಲು ತೊಳೆಸಿಕೊಳ್ಳುತ್ತ ಅಮೆಜಾನ್ ಕಾಡುಗಳಲ್ಲಿ-ಈ ಪ್ರಬಂಧದಲ್ಲಿ ಹಲ್ಲು ಕೀಳುವ ಪ್ರಸಂಗ ಕುರಿತು ಅದರ ಬಗ್ಗೆ ಇರುವ ಭಯ, ಕಲ್ಪನೆಗಳು ಇಲ್ಲಿ ನಗು ಉಕ್ಕಿಸುತ್ತವೆ. ಹಲ್ಲು ನೋವೆಂದು ದವಾಖಾನೆಗೆ ಬಂದ ಸರ್ವಾಧಿಕಾರಿ ಮೇಯರ್ ಹಲ್ಲನ್ನು ಮತ್ತು ಬರಿಸುವ ಇಂಜೆಕ್ಷನ್ ಕೊಡದೆ ಕಿತ್ತ ವೈದ್ಯನ ಕಥೆ - ಮಾರ್ಕ್ವೆಜದು ನೆನಪಾಯಿತೆಂದು ಲೇಖಕರು ಹೇಳುತ್ತಾರೆ. ಈ ಕಥೆ ಹುಡುಕಿ ಓದಬೇಕಿದೆ. ಆಸನದ ಸುಖ ಎಂದಿಗೂ ವೈದ್ಯ ಅನುಭವಿಸುವುದಿಲ್ಲ. ಅಮೆಜಾನ್ ಕಾಡುಗಳಲ್ಲಿ ಕಲ್ಪನೆಯಲ್ಲಿಯೇ ಓಡಾಡಿ ಹಲ್ಲು ಕೀಳಿಸಿಕೊಳ್ಳುವುದು ಇವೆಲ್ಲ ಓದುವಾಗ ನಮ್ಮ ಕಲ್ಪನೆಯು ಚಾಚುತ್ತದೆ.

ಕಂಬಕಂಬಗಳಿಗೆ ಚಂದಿರನ ನೇಣು ಪ್ರಬಂಧದಲ್ಲಿ ರಾತ್ರಿಯ ಕುರಿತು ವರ್ಣನೆ ಇದೆ. "ಇರುಳು ವೇದನೆಗಳನ್ನು ಹೀರುವ ಇಂಗುಕಾಗದ" ಎಂದು ಒಬ್ಬ ಹೇಳಿದರೆ. ವಿನ್ಸೆಂಟ್ ವ್ಯಾನ್ ಗೋ " ಹಗಲಿಗಿಂತ ಇರುಳು ಹೆಚ್ಚು ಜೀವಂತ, ಹೆಚ್ಚು ವರ್ಣರಂಜಿತ" ಎಂದು ಹೇಳುತ್ತಾನೆ. ಎರಡು ಅಭಿಪ್ರಾಯಗಳು ಉಲ್ಲೇಖಿಸಿರುವ  ಪ್ರಬಂಧ. ಎರಡು ದಿಕ್ಕುಗಳಲ್ಲಿ ಕಾವ್ಯಾತ್ಮಕವಾಗಿ ಇರುಳು ಪರಿಚಯ ಮಾಡಿಸುತ್ತದೆ.

ಮುಂಜಾನೆ ಯಾತ್ರೆಯ ಚಿತ್ರಗಳು ಪ್ರಬಂಧ ಓದುವಾಗ, ಒಂದು ವಿಧದಲ್ಲಿ ಬಯಲು ಶೌಚಾಲಯದ ಮಹತ್ವ, ಸಹಜತೆ, ಅಲ್ಲಿ ಚಿಗುರೊಡೆಯುವ ಮುಂಜಾನೆಯ ಬೆಳಗಿನ ಚಟುವಟಿಕೆಗಳು ಹೀಗೆ ಹತ್ತು ಹಲವು ದಿಕ್ಕುಗಳಿಂದ ಯೋಚಿಸುವಂತೆ ಮಾಡುತ್ತಲೆ ಹಲವು ಪ್ರಸಂಗಗಳು ಬಿಚ್ಚಿ ತೋರಿಸುತ್ತದೆ. ಈಗ ರೂಮಿಗೊಂದು ಬಾತರೂಮಗಳು ಕಟ್ಟಿಕೊಳ್ಳುವ ನಾವುಗಳು ಹಿಂದೆ ಬಯಲಿಗೆ ಕೂತು ಗೆಳೆಯರೊಂದಿಗೆ ಹರಟೆ ಹೊಡೆದಿದ್ದು ಈಗಲೂ ನೆನಪಿಗೆ ಬರುತ್ತದೆ. ಜೀವದ ಗೆಳೆಯನಿಗೆ ಬರದಿದ್ದರೂ ಅವನೊಂದಿಗೆ ಹೋಗಲೆಬೇಕಾದ ಅನಿವಾರ್ಯತೆ ಆಪ್ತತೆ ಬೆಳೆಸುತ್ತದೆ. ಅಡ್ಡಾದಿಡ್ಡಿ ತಿನ್ನುವುದು ಸಹ ಇದು ಕಡಿಮೆ ಮಾಡಿಸುತ್ತದೆ. ಲೇಖಕರಿಗೆ ಹಲವು ಸಂಗತಿಗಳ ಬಗ್ಗೆ ಎಚ್ಚರ ಸಹ ಇಲ್ಲಿದೆ. ಹೆಣ್ಣು ಮಕ್ಕಳ ಸಮಸ್ಯೆಗಳು ಸಹ ಅವರು ಉಲ್ಲೇಖಿಸುತ್ತಾರೆ. ನನಗೆ ಬಹಳ ಇಷ್ಟವಾಗಿದ್ದು " ಹೆಣ್ಣುಮಕ್ಕಳು ಚೆಂಬಲ್ಲಿ ಒಂದಿಷ್ಟು ನೀರುಟ್ಟುಕೊಂಡೆ ಬಂದು ಗಿಡಗಳಿಗೆ, ಹೂಸಸಿಗಳಿಗೆ ನೀರು ಚೆಲ್ಲುತ್ತಾರೆ" ಎಂಬರ್ಥದ ಮಾತುಗಳು.

ಗುಬ್ಬಿಗಳಿಗೊಂದು ಮನೆಯ ಕಟ್ಟಿಕೊಟ್ಟೆವು ಪ್ರಬಂಧ ಹಕ್ಕಿಗಳ ಸೂಕ್ಷ್ಮತೆ, ಸಹಜತೆ ಮತ್ತು ಅವುಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವವರ ಆಸೆಗಳು, ಒಡನಾಟ ದಾಖಲಿಸುತ್ತದೆ. ಅವುಗಳು ಮನುಷ್ಯನೊಂದಿಗೆ ಒಡನಾಟ ಬೆಳೆಸುವ ಮುಂಚೆ ಹಲವು ಬಾರಿ ಯೋಚಿಸುತ್ತವೆ. ಇಲ್ಲಿ ಲೇಖಕರ ಅತ್ತಿಗೆ ಮಗಳು " ಗುಬ್ಬಚ್ಚಿಗೆ ಕಾಳು" ಎಂದಾಗ ನನ್ನ ಕಿವಿ ನೆಟ್ಟಗಾದವು. ಬದಲಾಗುತ್ತಿರುವ ಸುತ್ತಲಿನ ವಾತಾವರಣದೊಂದಿಗೆ ಹೊಸ ಪೀಳಿಗೆ ಜೊತೆ ಅವು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿವೆ.

ಜಾತ್ರೆಯೆಂಬ ಕಾಮನಬಿಲ್ಲು-ನಾವು ಸಣ್ಣವರಿದ್ದಾಗ ಆಟ ಸಾಮಾನುಗಳು ನೆನಪಾದರೆ ಸಾಕು ಜಾತ್ರೆವರೆಗೂ ಕಾಯುತ್ತಿದ್ದೆವು. ಇಲ್ಲಿ ಲೇಖಕರು ಬಹಳ ವಿಶಾಲವಾಗಿ ಅದೆಷ್ಟೋ ಜಾತ್ರೆಯ ಮುಖಗಳು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಭೇಟಿಯಾಗುವ ಹೊಸ ಹುಡುಗಿ-ಹುಡುಗರು, ಸಂಬಂಧಗಳ ಗಟ್ಟಿಯಾಗುವುದು, ಸ್ಥಳಿಯರಿಗೆ ಸಂತೆ, ರಥ ಹೀಗೆ ನಾನಾ ವಿಷಯಗಳು ಇಲ್ಲಿವೆ.

ಸಂಪೂರ್ಣ ರಾಮಾಯಣ ಪ್ರಬಂಧದಲ್ಲಿ ಹಳೆ ಕಾಲದ ನಾಟಕದ ತಯಾರಿ, ಅದರಲ್ಲಿ ಸೇರಿಸುವ ಹನುಮಂತನ ಸುತ್ತ ಕುಣಿಯುವ ಸ್ತ್ರೀಯರು  ಪ್ರಸಂಗದಿಂದಾಗಿ ಶುರುವಾದ ಗಲಾಟೆ. ಟಿ.ವಿಯ ಅಪರೂಪತೆ ವಿವರಿಸುತ್ತಾ ನಗಿಸುತ್ತಾರೆ.

ಒಟ್ಟು ಪ್ರಬಂಧಗಳು ಓದುವಾಗ ನಕ್ಕಿದ್ದೇನೆ, ಹಳೆ ನೆನಪುಗಳೊಂದಿಗೆ ಮಾತಾಡುತ್ತಾ ಕೂತಿದ್ದೇನೆ. ಲೇಖಕರು ಜಾನಪದದ ಸಾಲುಗಳು,  ಕವಿಗಳ ಸಾಲುಗಳು, ನಾವು ಎಲ್ಲೋ ಈ ಹಿಂದೆ ನೋಡಿದಂತೆ ಅನ್ನಿಸುವ ಪ್ರಸಂಗಗಳು, ಸಾಮಾನ್ಯನೊಬ್ಬ ಹೇಳಿದ ಮಾತುಗಳು ಎಲ್ಲವೂ ಇಲ್ಲಿ ಉಲ್ಲೇಖಿಸುತ್ತಾರೆ. ಅವರ ಓದಿನ ವಿಸ್ತಾರದಿಂದ ಈ ಊರಿನ ಕಥೆ ಮತ್ಯಾವುದೋ ಊರಿನವನ ಮಾತು ಸೇರಿ ವಿಶಾಲವಾಗುತ್ತದೆ.   ಕಾವ್ಯಾತ್ಮಕ ಸಾಲುಗಳಿಂದ ತುಂಬಿರುವ ಕೆಲವು ಪ್ರಬಂಧಗಳಿಗೆ ಒಂದು ರೀತಿಯ ತಾಳ್ಮೆಯ, ಎಚ್ಚರದ ಓದು ಸಹ ಅಗತ್ಯವಿದೆ. ಎಲ್ಲಾ ಪ್ರಬಂಧಗಳು ಒಂದೇ ರೀತಿಯಲ್ಲಿ ಇಲ್ಲ. ಒಂದಿಷ್ಟು ಸಂಪೂರ್ಣ ಕಲ್ಪನೆಯೊಳಗರಳಿದರೆ, ಅನುಭವಗಳಿಂದ ರೂಪುಗೊಂಡಿರುವ ಪ್ರಬಂಧಗಳ ಪ್ರಸಂಗಗಳು ಹೆಚ್ಚು ಸಹಜವಾಗಿ ಕಾಡುತ್ತವೆ...

# ಕಪಿಲ ಪಿ.ಹುಮನಾಬಾದೆ.
4/03/2020

Sunday 1 December 2019

ಹಾಣಾದಿ ಕುರಿತು ಸಂದೀಪ್ ಈಶಾನ್ಯ ಅವರ ಅಭಿಪ್ರಾಯ

ಪ್ರಯಾಣವನ್ನು ಆರಂಭಿಸುವ ಮೊದಲೇ ತಲುಪುವ ಗಮ್ಯತೆಯ ಕುರಿತು ನಿಶ್ಚಿತವಾಗಿರುವುದು ಬಹಳ ಮುಖ್ಯ. ಈ ಕ್ರಮವನ್ನು ಸಾಹಿತ್ಯದಲ್ಲೂ ಬಹುತೇಕ ಒಪ್ಪಬಹುದು. ಕೆಲವೊಮ್ಮೆ ಕತೆ, ಕವಿತೆ ಸೇರಿದಂತೆ ಉಳಿದ ಎಲ್ಲಾ ಪ್ರಕಾರಗಳೂ ಲೇಖಕನನ್ನು ಮೀರಿ ಬೆಳೆಯುವ ಸಾಮರ್ಥ್ಯವನ್ನು ತೋರುತ್ತವೆ. ಇದಾಗಿಯೂ ಬಹುವಾಗಿ ಕಾಡುವ ವಸ್ತುವೊಂದು ತನ್ನ ಆರಂಭದ ಗುಟ್ಟನ್ನು ತೋರಗೊಡದಿದ್ದರೂ ಗಮ್ಯತೆಯನ್ನು ತನ್ನ ಆಳದಲ್ಲಿ ಈ ಮೊದಲೇ ಉದುಗಿಸಿಟ್ಟುಕೊಂಡಿರುತ್ತದೆ ಎನ್ನುವುದು ನಿರ್ವಿವಾದ.

ಸದ್ಯ ಈ ಮಾತನ್ನು ಗೆಳೆಯರಾದ ಕಪಿಲ ಹುಮನಬಾದೆ ಅವರ ರಚನೆಯ "ಹಾಣಾದಿ" ಕಾದಂಬರಿಗೂ ಅನ್ವಯಿಸಿ ನೋಡಬಹುದು. ಸಿಗರೇಟನ್ನು ಕೊಡವುತ್ತಲೇ ನೆನಪುಗಳ ಸುರುಳಿಯನ್ನು ಪದರುಗಳಲ್ಲಿ ಓದುಗನ ಎದುರು ತೆರೆದಿಡುತ್ತಾ ಸಾಗುವ ಈ ಕಾದಂಬರಿ ಕೇವಲ ಹತ್ತು ಪುಟಗಳನ್ನು ಕ್ರಮಿಸುವಷ್ಟರಲ್ಲಿ ಮತ್ತೊಂದು ಸ್ತರಕ್ಕೆ ಬಂದು ನಿಲ್ಲುತ್ತದೆ. ಯಾವುದೇ ಅನುಕರಣೆಯ ಬೇನ್ನರದೇ ಸತ್ವವನ್ನು ಹೊಂದಿರುವ ತನ್ನ ಬೇರಿನ ಮೂಲಕವೇ ಆಕ್ರಮಿಸಿಕೊಳ್ಳಲು ಹಾತೊರೆಯುವ ಕಪಿಲ ಅವರು ನುರಿತ ಬರಹಗಾರರಂತೆ ಕಾಣುತ್ತಾರೆ. ಹೆಸರಿಲ್ಲದ ಹುಡುಗಿ, ಕತೆಯ ಮೂಲವೇ ಆಗಿರುವ ಬಾದಾಮಿ ಗಿಡ, ಯಾವುದೋ ಗುಹೆಯಲ್ಲಿ ವಾಸ ಮಾಡುವ ಗುಬ್ಬಿ ಆಯಿಯ ಮೂಲಕ ಓದುಗನನ್ನು ಎದುರು ಕೂರಿಸಿಕೊಂಡು ನಿರ್ಲಿಪ್ತವಾಗಿ ಕಥೆಯನ್ನು ಹೇಳುತ್ತಾ ಸಾಗುವ ಕಪಿಲ ಅವರು ಪ್ರತಿ ಹಂತದಲ್ಲೂ ಚಕಿತಗೊಳಿಸುತ್ತಾರೆ. 

ಇಟಲಿ ಲೇಖಕ ಉಂಬರ್ಟೋ ಎಕೋ ಬರೆದ "ದಿ ಐಲ್ಯಾಂಡ್ ಆಫ್ ದಿ ಡೇ ಬಿಫೋರ್" ಕಾದಂಬರಿಯನ್ನು ರಚನೆಯ ದೃಷ್ಟಿಯಿಂದ ದೀರ್ಘವಾಗಿ ನೆನಪಿಸುವ ಕಪಿಲ ಅವರ ಈ ಕಾದಂಬರಿ ಓದುಗನ ಒಳಗೆ ಬೆಳೆಯುವ ಶಕ್ತ ಬರವಣಿಗೆಯಿಂದ ಕೂಡಿದೆ. ಗಟ್ಟಿಯಾದ ಕತೆಯ ಹೊರತಾಗಿ ಯಾವುದೇ ಕಾರಣಕ್ಕೂ ನಾನು ಕಥನವನ್ನು ರಮ್ಯ ರೂಪಕಗಳ ಸಹಾಯದಿಂದ ಮಾತ್ರ ಚಂದಗೊಳಿಸುವುದಿಲ್ಲ ಎನ್ನುವ ಧೋರಣೆಯನ್ನು ತೋರಿದ್ದರೂ ಅಷ್ಟೇ ಪ್ರಬುದ್ಧ ರೂಪಕಗಳನ್ನು ಈ ಕಾದಂಬರಿ ಹೊಂದಿದೆ. ಗುಬ್ಬಿ ಆಯಿಯ ಸತ್ವಭರಿತ ಮಾತುಗಳು, ಹೊಲದ ಹಾದಿ, ಅಪ್ಪನ ನೆನಪುಗಳು ಎಲ್ಲವನ್ನೂ ಒಮ್ಮೆಲ್ಲೇ ಎದೆಗಿಳಿಸಿಸುವ ಈ ಪುಸ್ತಕ "ಮ್ಯಾಜಿಕಲ್ ರಿಯಲಿಸಂ" ಗುಣವನ್ನು ಹೊಂದಿದೆ ಎನ್ನುವ ನಿರ್ಧಾರಕ್ಕೆ ಬರುವ ಹೊತ್ತಿಗೆ ಕತೆ ವಾಸ್ತವಕ್ಕೆ ಬಂದು ನಿಂತಿರುತ್ತದೆ. ಆ ಮೂಲಕ ಓದುಗನ ಎಣಿಕೆಯನ್ನು ತಲೆಕೆಳಗು ಮಾಡಿಬಿಡುತ್ತದೆ. 

ಕಪಿಲ ಓರ್ವ ಲೇಖಕರಾಗಿ ಯಾವುದಕ್ಕೆ ಹೆಚ್ಚು ತುಡಿಯುತ್ತಾರೆ ಎನ್ನುವುದು ಇದೇ ಕಾದಂಬರಿಯಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಅವರ ವಿಚಾರಗಳು ಇನ್ನಷ್ಟು ಗಟ್ಟಿಯಾಗಲಿ. ಕಡೆಯದಾಗಿ, ಮಹಾನಗರಗಳ ಗದ್ದಲದ ನಡುವೆ ಕಳೆದುಹೋಗುತ್ತಿರುವ ಶಕ್ತ ಬರಹಗಾರರನ್ನು ನೋಡುತ್ತಾ ನೊಂದುಕೊಳ್ಳುವ ಸಮಯದಲ್ಲೇ ಕಪಿಲ ಅವರ ಬರವಣಿಗೆ ಓದಲು ಸಿಕ್ಕಿದ್ದು ಮತ್ತೊಂದು ಭರವಸೆ ಎನಿಸುತ್ತಿದೆ. ಕಪಿಲ ಅವರೊಳಗಿ‌ನ ಲೇಖಕ ನಿದ್ರಿಸದಿರಲಿ.

- ಸಂದೀಪ್ ಈಶಾನ್ಯ

https://www.instamojo.com/kavyamane580/--cdfc6/ 

ಈ ಲಿಂಕ್ ಬಳಸಿ. ಹಾಣಾದಿ ಕಾವ್ಯ ಮನೆ ಪ್ರಕಾಶನದಿಂದ ತೆಗೆದುಕೊಳ್ಳಬಹುದು‌‌

ಹಾಣಾದಿ ಕುರಿತು ರಾಜೇಶ್ ಶಿಂಧೆಯವರ ವಿಮರ್ಶೆ ಲೇಖನ

ಮೂರು ತಾಸಿನ ಸಿನಿಮಾದಂತೆ ಗೋಚರವಾಗುವ "ಹಾಣಾದಿ" ಇದನ್ನ ಒಂದೆ ಗುಕ್ಕಿನಲ್ಲಿ ಹೈರಾಣಾಗದೆ ನಡೆದು ಬಂದೆ..

ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಪ್ರಯೋಗಗಳ ಜೊತೆಗೆ ಯುವ ಬರಹಗಾರರ ದಂಡು ಸೃಜನಶೀಲರಾಗಿ ಸೃಜನಾತ್ಮಕ ಬರವಣಿಗೆಯ ಮೂಲಕ‌ ತಮ್ಮ‌ ಛಾಪನ್ನೂ ಮೂಡಿಸುವಲ್ಲಿ ತನ್ನ ಗಟ್ಟಿಯಾದ ನಿಷ್ಣಾತ ಕಾವ್ಯಭಿವ್ಯಕ್ತಿಯಿಂದ ಗುರುತಿಸಿಕೊಂಡಿದ್ದಾರೆ ಕೆಲವರ ಬರಹಗಳು ಮೋಡಿ ಮಾಡಿ.ಓದುಗಪ್ರೀಯರು ನಿರುತ್ತರರಾಗಿದ್ದಾರೆ ಅಂತವರ ಸಾಲಲ್ಲಿ ನಿಲ್ಲುವ 
ನಮ್ಮ ಬೀದರ ಜಿಲ್ಲೆಯ 
ಭರವಸೆಯ ಯುವ ಬರಹಗಾರರಾದ ಕಪೀಲ್ ಪಿ ಹುಮನಬಾದೆ ಅವರ "ಹಾಣಾದಿ" ಕಾದಂಬರಿಯ ಕುರಿತು ಒಂದು ಅವಲೋಕನ ತಿಳಿದಂತೆ ನನ್ನದೆ ಶೈಲಿಯಲ್ಲಿ..!

ಈ ಹಾಣಾದಿ ಕಾದಂಬರಿಯಲ್ಲಿ ಇಡಿ ಕತೆಯನ್ನ ಒಂದು ವೃದ್ಧ ಆತ್ಮವೆ ಆವರಿಸಿಕೊಂಡು ವಿವರಿಸಿಕೊಂಡು ಕತೆ ದಣಿಯದ ವೃದ್ಧ ಆತ್ಮದಂತೆ ಸಾಗುತ್ತದೆ.ಇಲ್ಲಿ ಬರುವ ಹಲವು ಪಾತ್ರಗಳು ಇಡಿ ಕಾದಂಬರಿಯುದ್ದಕ್ಕು ಆಧಾರ ಹಾಗೂ ಸಾಕ್ಷಿ ಒದಗಿಸುತ್ತಾ ಸಾಗುತ್ತದೆ.ಹಾಣಾದಿ ಎಂದರೆ ನಮ್ಮ ಬೀದರ ಭಾಷೆಯಲ್ಲಿ "ಜೋಡೆತ್ತಿನ ಗಾಡಿ ಹೋಗುವ ದಾರಿ ಅಥವಾ ನಮ್ಮಲ್ಲಿ ಹೊಲಗಳಿಗೆ ಹೋಗುವಾಗ ಅಕ್ಕಪಕ್ಕದ ಹಚ್ಚ ಹಸಿರಿನ ಎದೆ ಸೀಳಿಕೊಂಡು ಆದ ಕಾಲ್ದಾರಿ ಸಹ ಆಗುತ್ತದೆ" ಕತೆಯು ಸಹ ವಿಶಿಷ್ಟ ಮತ್ತು ಕೌತುಕದ ತಿರುವು ಪಡೆಯುತ್ತಾ ಅಲ್ಲಲ್ಲಿ ಆತಂಕಕ್ಕೆ ತಳ್ಳಿ ಮತ್ತೆ ಮೇಲೆತ್ತಿ ನಿರೂಪಕನ ಗೊಂದಲದ ಗೂಡಿಗೆ ಮತ್ತಷ್ಟು ಮಗದಷ್ಟು ಕಸ ಕಡ್ಡಿ ತುಂಬಿಸುತ್ತಾ ಒಳಗೊಳಗೆ ಅದು ಮಜಬೂತ್ ಆಗುತ್ತಾ ಕೊನೆಯ ಘಳಿಗೆಯಲ್ಲಿ ಎಲ್ಲವೂ ತಿಳಿದು ಒಮ್ಮೆ ಬೆಚ್ಚಿ ಬೀಳುವ ಮೂಲಕ ಹಾಗೂ ಹಲವು ಪ್ರಶ್ನೆಗಳು ಹುಟ್ಟುಹಾಕುವ ಮೂಲಕ ಮುಕ್ತಾಯವಾಗುತ್ತದೆ.

ಕಾದಂಬರಿ ಎಂದರೆ ಒಂದು ನೈಜತೆ ಅಥವಾ ಕಲ್ಪನೆಯಲ್ಲಿ ಪರಿಪಕ್ವವಾಗಿ ಮೂಡಿ ಬರುವ ಒಂದು ಕಥನ.ಎಲ್ಲ ಕತೆಗಳಲ್ಲಿ ಪಾತ್ರಗಳು ವಸ್ತುಗಳು ಸ್ಥಳಗಳು ಇವ್ವುಗಳನ್ನಿಟ್ಟುಕೊಂಡು ನಡೆಯುತ್ತಿರುವ/ನಡೆದ ಘಟನೆಗಳ ಸ್ಥೂಲವಾದ ವಿವರಣಾತ್ಮಕ ರಚನೆಯೆ ಕಾದಂಬರಿಯಾದರೆ, ಹಾಣಾದಿಯ ಕತೆ ಪ್ರಾರಂಭವಾಗೋದು ನಿರೂಪಕನ ಪಟ್ಟಣದ ದಿನನಿತ್ಯದ ಅಮೂಲಾಗ್ರ ಸಮಸ್ಯೆಗಳಿಂದ ಸಣ್ಣ ಸಮಧಾನದ ಸೆಳೆವು ಅನ್ನುವಂತಹ  ರಜೆ ದಿನಗಳಿಂದ ಹಲವು ವರ್ಷಗಳಿಂದ ಊರಿನ ಮುಖವೇ ನೋಡದ ನಿರೂಪಕ ಊರಿನ ಬಸ್ ಹತ್ತಿ ಅದರ ವೇಗಕ್ಕೆ ವಿರುದ್ಧವಾಗಿ ತನ್ನ ಬಾಲ್ಯದ ನೆನಪುಗಳತ್ತ ಟೈಮ್ ಮಷೀನ್ ಹತ್ತಿ ಹೋಗಿ ಅಲ್ಲಿನ ಹಲವಾರು ಅನೂಹ್ಯ ಅತೀತ ನೆನಪುಗಳ ಬುತ್ತಿ ಬಿಚ್ಚಿಕೊಂಡಾಗ ಓದುಗನಿಗೆ ಒಂದು ಕ್ಷಣ ತನ್ನದೆ ಈ ನೆನಪುಗಳು ಅನ್ನುವಷ್ಟು ಮೊದಲಿಗೆ ಕತೆ ಆಪ್ತವಾಗದೆ ಇರಲಾರದು ಅನ್ನೊದೊಂದು ಸಂಭ್ರಮವೇ ಸರಿ.ಪಟ್ಟಣದ ಬದುಕಿಗೆ ಸಣ್ಣದೊಂದು ವಿದಾಯ ಹೇಳಿ ತನ್ನ ಹುಟ್ಟೂರಿನತ್ತ ಬಸ್ ಓಡುವಾಗ ನೆನಪುಗಳು ಸಾಲು ಸಾಲಾಗಿ ಎದೆಗವಚಿಕೊಂಡು ಹಳ್ಳಿಗೆ ಬಂದಾಗ ಸ್ವಾಗತಕ್ಕೆ ಇದ್ದ ಅಜೀವ ಆಕೃತಿಗಳಿಂದಲೆ ಕತೆಯ ಹೊಸ ರೂಪಕ್ಕೆ ತಿರುಗುತ್ತದೆ.ಅಲ್ಲಿಂದ ಶುರುವಾದ ನಿರೂಪಕ ಕತೆ ನೇರವಾಗಿ ಊರೊಳಗೆ ಪ್ರವೇಶಿಸಿದಾಗ ಆತನಿಗೆ ಅದೆಷ್ಟೋ ವರ್ಷಗಳ ಕೆಳಗೆ ಗಲ್ಲಿ ಗಲ್ಲಿ ಸುತ್ತಿ ಆಡಿ ಬೆಳೆದು ನೆನಪುಗಳ ಮೂಟೆಯನ್ನ ಹೋರಿಸಿದ ಊರು ಅಕ್ಷರಶಃ ಯಾರು ಯಾರಿಲ್ಲದಂತೆ ಬಾಯಾರಿದಾಗ ನೀರಿಲ್ಲದ ಬಾವಿಯಲ್ಲಿ ಕಸ ಕಡ್ಡಿ ಹೊಲಸು ತುಂಬಿ ನಾರುವಾಗ ಅಲ್ಲಿ ಒಬ್ಬ ಅಜ್ಜಿ ದುತ್ತೆಂದು ಕಾಣಿಸಿಕೊಂಡು ನಿರೂಪಕನ ಹಣೆಯ ಮೇಲಿನ ಗೆರೆಗಳೆಲ್ಲಾ ತಿಳಿಯಾಗುವಂತೆ ಮಾಡಿ ಬಳಲಿ ಬೆಂಡಾಗಿ ಬಾಯಾರಿದವನಿಗೆ ಅಮೃತ ತುಂಬಿದ ಕೊಡ ಸಿಕ್ಕಂತೆ ಅನುಭವಾಗುವ ಸಮಯಕ್ಕೆ ಕತೆ ಮೂಲ ರೂಪ ಪಡೆಯೊದು ಇಲ್ಲೆ ಕಾರಣ ಅಜ್ಜಿಯ ಪ್ರವೇಶವೇ ಈ ಕತೆಯಲ್ಲಿ ತಿರುವು ನೀಡುತ್ತದೆ‌.ಈ ಕಾದಂಬರಿಯ ಕತೆಯ ಆಧಾರವೇ ಈ ಅಜ್ಜಿ ಹೇಳುವ ಕತೆಯೊಳಗಿನ ಕತೆಗಳ ಚಿತ್ರಣ ಮತ್ತು ನಿರೂಪಕನಿಗೆ ಕೌತುಕದ ಮಿಶ್ರಣ ಮನದೊಳಗೆ ಶುರುವಾದರೆ ಓದುಗನಿಗೆ ಎಡೆಬಿಡದೆ ಓದಿಸಿಕೊಳ್ಳುವ ಹೂರಣ.ಅಸಲಿಗೆ ಬಹುತೇಕ ಕತೆಗಾರರು ಪಾತ್ರದಿಂದ ಹೊರಗುಳಿದು ಕತೆ ಕಟ್ಟುತ್ತಾರೆ ಆದರೆ ಇಲ್ಲಿ ಕತೆಗಾರನೆ ಕತೆಯ ನಿರೂಪಕನ ಪಾತ್ರವನ್ನ ಅತ್ಯಂತ ಸಮರ್ಪಕವಾಗಿ ತುಂಬಿ ಭೇಷ್ ಅನಿಸಿಕೊಂಡಿದ್ದಾರೆ.ಅಜ್ಜಿಯ ಗುಟ್ಟು ಬಿಟ್ಟುಕೊಡದ ಒಗಟಿನಂತ ಮಾತುಗಳು ಅತ್ಯಂತ ಕ್ಲುಪ್ತವಾಗಿ ಕತೆಯ ಕೊನೆತನಕ ನಿಭಾಯಿಸಿದ ಹೌದೌದು ಪರಿ ಮೆಚ್ಚಬೇಕು.

ಇದೊಂದು ಹಳ್ಳಿಯಲ್ಲಿ ನಡೆದ ಕಥಾಸರಣಿಗಳ ಗುಚ್ಚವನ್ನ ಇಲ್ಲಿ ಹಿಡಿದಿಟ್ಟಂತೆ ಮನನವಾಗುತ್ತದೆ ನಿರೂಪಕನ ತಂದೆಯ ಬಾದಾಮಿ ಗಿಡದ ಮೇಲಿನ ವ್ಯಾಮೋಹ ಪ್ರೇಮ ಎಲ್ಲದಕ್ಕು ಮಿಗಿಲಾಗಿ ಆ ಬಾದಾಮಿ ಗಿಡದ ಸುತ್ತ ನಡೆಯುವ ಕಾಕತಾಳಿಯವಾದರು ಸತ್ಯವೆನಿಸುವಂತೆ ಊರಲ್ಲಿ ನಡೆಯುವ ಪ್ರತಿ ಘಟನೆ ಈ ಬಾದಾಮಿ ಗಿಡದ ಬುಡಕ್ಕೆ ಬಂದು ಕಗ್ಗಂಟಿನ ಬೇರಾಗಿ ನಿರೂಪಕನ ತಂದೆಯ ನೋವಿನ ಖಾತೆಗೆ ದಿನವೊಂದು ಜಮೆಯಾಗುವ ನಿದರ್ಶನವಾಗುವ ಎಲ್ಲ ಘಟನೆಗಳು ಅತ್ಯಂತ ಸೂಕ್ಷ್ಮವಾಗಿ ಹಿಡಿದಿಟ್ಟು ಕತೆಗೆ ರೋಚಕತೆಯ ಲೇಪ ಮೆತ್ತಿದ ಬರಹಗಾರರ ಜಾಣ್ಮೆ ಮೆಚ್ಚುವಂತದ್ದು.ನಿರೂಪಕನ ಪ್ರತಿ ಪ್ರಶ್ನೆಯಿಂದ ಹೊಸ ಆತಂತ ಕೌತುಕ ಹುಟ್ಟುವ ಮಾತುಗಳಾಡುವ ಗುಬ್ಬಿ ಅಜ್ಜಿ (ಆಯಿ) "ಹಾಳೂರಿಗುಳಿದವನೇ ಗೌಡ" ಅನ್ನೋ ರೀತಿಯಲ್ಲಿ ಇಡಿ ಊರೆ ಪಾಳು ಬಿದ್ದು ಸ್ಮಶಾನವಾಗಿದ್ದ (ಆ ಊರೆ ಕತೆಗೆ ಎಲ್ಲ ರೀತಿಯ ವಿಷಯ ವಸ್ತು ಪಾತ್ರಗಳು ಒದಗಿಸುತ್ತದೆ.) ಅನ್ನುವಂತ ಸ್ಮಶಾನ ತದ್ರೂಪಿ ಊರಿಗೆ ಆ ಗುಬ್ಬಿ ಆಯಿನೆ ವಾರಸುದಾರಳು ಅನ್ನುವಂತೆ ನಿರೂಪಕನ ಯೋಗಕ್ಷೇಮ ವಿಚಾರಿಸುತ್ತಾ 
ಹಕ್ಕಿ ಕಾಲಿಡದ ಊರಲ್ಲಿ ನಿರೂಪಕನ‌ ಹಸಿದ ಹೊಟ್ಟೆಗೆ ಬಿಸಿ ಬಿಸಿಯಾದ ರೊಟ್ಟಿ ಹಾಗೂ ಮಲಗಕ್ಕೆ ಪರವಾಗಿಲ್ಲ ಅನ್ನುವಂತ ವ್ಯವಸ್ಥೆ ಕಲ್ಪಸಿಕೊಟ್ಟು ಅವನನ್ನ ಚೆನ್ನಾಗಿ ನೋಡಿಕೊಳ್ಳುತ್ತಾ ಇರ್ತಾಳೆ ಅದೆಲ್ಲಿಂದ ಒಂದು ಸಣ್ಣ ಹುಡುಗಿ ಈ ಮುದುಕಿ ಹತ್ರ ಬರುತ್ತೆ ಅದು ನಿರೂಪಕನ ತಂದೆಯ ಆಳು ಕಂಠಿಯ ಮೊಮ್ಮಗಳು ಅಜ್ಜ ಸತ್ತಾಗಿಂದ ಈ ಗುಬ್ಬಿ ಆಯಿ ಹತ್ರಾನೆ ಇರುತ್ತಾಳೆ ಹೀಗೆ ಸಾಗುವ ಕತೆಯಲ್ಲಿ ಮಧ್ಯದಲ್ಲಿ ಬರುವ ಕೆಲವು ಸಣ್ಣ ಪಾತ್ರಗಳು ಕೊನೆಯಲ್ಲಿ ಏನಾದವು ಅವ್ವು ನಿಜಕ್ಕು ಬದುಕಿದ್ದವಾ ಅನ್ನೋದು ಪ್ರಶ್ನೆ..?.ಉತ್ತರ ಕೊನೆಯಲ್ಲಿದೆ.ಹೀಗೆ ಸಾಗುತ್ತಾ ಕತೆಗಾರನ ಪ್ರತಿ ಕದಲಿಕೆಗೆ ಹೊಸ ಆಯಾಮವೆಂಬಂತಹ ಮಾತುಗಳು ಕತೆಯ ರೋಚಕತೆಗೆ ಹಿಡಿದ ಕೈಗನ್ನಡಿ.ಇಲ್ಲಿ ಕತೆಗಾರ ಅನ್ವೇಷಕ ಹಾಗೂ ನಡೆಯುವ ಪ್ರತಿ ಸನ್ನಿವೇಶಕ್ಕೆ ಮೂಕ ಕಿವುಡ ಸಾಕ್ಷಿಯಂತೆ ಉಳಿಯುವ ಅನಿವಾರ್ಯತೆ ಸೃಷ್ಟಿ ಆಗುತ್ತದೆ ಅಜ್ಜಿಯ ನಡೆ ನುಡಿಯನ್ನ ಕೇಳದೆ ಬೇರೆ ದಾರಿಯಿಲ್ಲ ಕಾರಣ ಹಲವೂ ವರ್ಷಗಳ ನಂತರ ಊರಿಗೆ ಬಂದಿದ್ದಿನಿ ಊರು ಮನೆಯಲ್ಲಿ ಥೇಟ್ ಸ್ಮಶಾನದ ಅನುಭವ.ತನ್ನ ತಂದೆಯ ಅನುಪಸ್ಥಿತಿಯ ಯಾಕಿದೆ.? ಅಪ್ಪ ಎಲ್ಲಿದ್ದಾನೆ..? ಅನ್ನೋ ಹಲವಾರು ಪ್ರಶ್ನೆಗಳೆ ಕತೆ ಸಾಗೋದಕ್ಕೆ ಕಾರಣವಾಗ್ತವೆ.ಗುಬ್ಬಿ ಆಯಿಯಲ್ಲಿ ತನ್ನ ತಂದೆಯ ಬಗ್ಗೆ ಕೇಳಿದಾಗೊಮ್ಮೆ ಅವಳು ಏನೇನೋ ಹೇಳಿ ಒಂದು ಪೂರ್ವ ನಿರ್ಧಾರಿತ ಮೂಹುರ್ತದಂತ ಸಮಯಕ್ಕಾಗಿ ಕಾಯ್ಕೊಂಡು ಬರೋತನಕದ ಕತೆಯ ನಿರೂಪಣ ಶೈಲಿ ಚೆನ್ನಾಗಿದೆ.ಇಲ್ಲಿ ನಿರೂಪಕನ ತಂದೆ ನೆಟ್ಟ ಬಾದಾಮಿ ಗಿಡದಿಂದಲೇ ಊರಿನವರಿಗೆ ಒಂದಲ್ಲ ಒಂದು ಆಘಾತಕಾರಿ ಸಮಸ್ಯೆಗಳು ಆಗುತ್ತಿದ್ದೆ ಎಂಬ ಪ್ರತಿಯೊಂದು ಘಟನೆಯು ಎಷ್ಟು ಸತ್ಯವನಿಸುವಷ್ಟು ನಡೆದುಕೊಳ್ಳೊ ಜನರು ಅದು ಕಾಕತಾಳಿಯೋ ಸತ್ಯವೋ ತರ್ಕಿಸದೆ ಹಾಗೆ ಸತ್ಯ ಯಾವುದು ಅನ್ನೋದು ಅರಿಕೆಗೆ ಬರದೆ ಎಲ್ಲವೂ ನಿರೂಪಕನ ತಂದೆಯನ್ನ ಗುರಿಯಾಗಿಸಿಕೊಂಡು ಆ ಬಾದಾಮಿ ಗಿಡಕ್ಕೆ ನೇರ ದೋಷಣೆ ಮಾಡ್ತಾರೆ ಅದು ನೆಟ್ಟಾಗಿಂದ ತಮಗಾಗುತ್ತಿರುವ ಸಮಸ್ಯೆ ಈ ಗಿಡದಿಂದ ಇದನ್ನ ಕಡಿದು ಹಾಕಬೇಕು ಅನ್ನೋ ಹಲವು ಸರಿಯ ತೀವ್ರ ಪ್ರಯತ್ನಗಳು ನಡೆದರು ಅದು ಕತೆಗಾರನ ತಂದೆಯ ಧೃಡ ಸಂಕಲ್ಪದ ಎದುರು ಮಗುಚಿ ಬಿದ್ದು ಹೋಗುತ್ತವೆ.ಇಲ್ಲಿ ಮೂಲ ಕಾರಣ ಏನು ಅಂತ ತಿಳಿಯದ ಜನರ ಪ್ರತಿಗಾಮಿತನ ಎಷ್ಟು ಅನ್ನೋದು ಸ್ಪಷ್ಟವಾಗಿ ತಿಳಿದು ಬರುತ್ತದೆ‌‌.ಗುಬ್ಬಿ ಆಯಿ ಈ ಕತೆಗಳು ನಿರೂಪಕನಿಗೆ ವಿವರಿಸುತ್ತಾ ಮಧ್ಯ ಕಂಠಿ (ಇವನು ನಿರೂಪಕನ‌ ತಂದೆಯ ಆಳು) ಅನ್ನೋ ದೈತ್ಯ ದೇಹಿಯೊಬ್ಬನ ಕತೆಯೊಂದು ಪ್ರವೇಶ ಮಾಡಿ ಈ ಹಾಣಾದಿಯ ಮೊಳಕಾಲುದ್ದ ಕೆಸರಿನ ಖೆಡ್ಡಾದಲ್ಲಿ ಬಿದ್ದು ಸತ್ತು ಹೋದ ಕತೆ ಸೆಲೆಯೊಂದು ಹಾದು ಹೋಗುತ್ತದೆ ಇಲ್ಲಿ ಹಾಣದಿ ಅನ್ನೋದು ಎಂತಹ ಅಪಾಯಕಾರಿ ಅನ್ನೋದು ಊಹಿಸಬಹುದು.

ಆನಂತರ ಊರ ಹಾಣಾದಿಗೆ ಕತೆ ಬರುತ್ತದೆ ಗುಬ್ಬಿ ಆಯಿ ಮತ್ತು ನಿರೂಪಕ ತನ್ನ ತಂದೆ ಎಲ್ಲಿ ಅಂತ ಮುಂದಿಡುವ ಪ್ರಶ್ನೆಗೆ ಅಜ್ಜಿ ಖಂದಿಲು ಹಿಡಿದು ಹಾಣಾದಿಯಲ್ಲಿ ನಡೆಸ್ಕೊಂಡು ಹೋಗುವ ಮೂಲಕ ಒಂದೊಂದೆ ಕತೆಯನ್ನ ಮತ್ತು ಜನರು ಬಾದಾಮಿ ಗಿಡದ ಬೇರುಗಳಿಗಿಂತ ಜಾಸ್ತಿ ಕಟ್ಟಿರುವ ಕತೆಗಳು ಹೇಳುತ್ತಾ ಸಾಗುತ್ತಾಳೆ.ಆ ಕಗ್ಗತ್ತಲ ರಾತ್ರಿಯ ಪ್ರತಿ ಹೆಜ್ಜೆಯು ಹೊಸ ಕತೆ ಪ್ರತಿಯೊಂದು ಶಬ್ದವು ಭಯ ಮತ್ತು ಸತ್ಯ ಅರಗಿಸಿಕೊಳ್ಳುವ ಎಚ್ಚರಿಕೆಗಳೆರಡು ನೀಡುತ್ತಾ ಸಾಗುತ್ತದೆ ಕತೆ ಹಾಣಾದಿ ಅಂತ ಕಾದಂಬರಿಗೆ ಹೆಸರು ಇಲ್ಲಿಂದಲೆ ಬಂದದ್ದು.

ಕಂಠಿಯ ಸಾವಿನ ನಂತರ ನಿರೂಪಕನ ತಂದೆ ಒಂಟಿಯಾಗಿದ್ದರಿಂದ ಗುಡ್ಡದ ಮೇಲಿರೋ ಗುಬ್ಬಿ ಆಯಿಯನ್ನ ತನ್ನ ಮನೆಗೆ ತಂದು ಇಟ್ಕೊಂಡು ಹೊತ್ತನ್ನಕ್ಕೆ ಆಸರೆ ಕೊಟ್ಟು ತನಗೊಂದಷ್ಟು ಬೇಯಿಸಿ ಹಾಕಲು ಇರಲಿ ಅನ್ನೋ ಕಾರಣಕ್ಕೆ.ಈ ಬಾದಾಮಿ ಗಿಡದ ಕೆಳಗೆ ಒಂದಿನ ಈ ಅಜ್ಜಿ‌ ನಿಂತರೂ ಸಹ ಅದನ್ನ ದೆವ್ವ ಅಂತ ಜನರು ನೋಡಿದವರು ಆಡಿಕೊಳ್ಳಲು ಶುರು ಮಾಡ್ತಾರೆ ಆದರೆ ಇದ್ಯಾವುದೂ ಬಾದಾಮಿ ಗಿಡದಿಂದ ಆಗುತ್ತಿಲ್ಲ ಅನ್ನೋದು ಗುಬ್ಬಿ ಆಯಿಗೆ ಮತ್ತು ಇವನ ತಂದೆಗೆ ಚೆನ್ನಾಗಿ ಗೊತ್ತಿರುತ್ತೆ ಆದರೆ ಮಡಕೆ ಬಾಯಿ ಮುಚ್ಚಬಹುದು ಜನರ ಬಾಯಿ ಮುಚ್ಚೋದು ಕಷ್ಟ. ಮಗನಿಗಿಂತ ಹೆಚ್ಚಾಗಿ ಪ್ರೀತಿಯಿಂದ ಬೆಳಸಿದ ಬಾದಾಮಿ ಗಿಡ ಎಷ್ಟೆಕ್ಕಾ ಆತಂಕಗಳು ಸೃಷ್ಟಿ ಮಾಡುತ್ತಿದೆ ಅನ್ನೋದು ಸುಳ್ಳು ಅದನ್ನ ಜನರಿಗೆ ಹೇಗೆ ತಿಳಿಸಿದರು ಜನರ ಕ್ಯಾರೆ ಅನ್ನಲ್ಲ ಯಾಕೆಂದರೆ ಅಲ್ಲಿನ ಒಬ್ಬ ಸ್ವಾಮಿ ಕಟ್ಟಿದ ಕತೆಗೆ ಹೂಂ ಅಂತ ತಲೆಯಾಡೀಸೋ ಜನ ಅವನು ಊರಿಗೆ ಊರೆ ಬಾದಾಮಿ ಗಿಡಕೆ ಗತಿ ಕಾಣಿಸಿ ಎಂದು ಹಾಗೂ ಊರಲ್ಲಿ ಆಗುತ್ತಿರುವ ಎಲ್ಲದಕ್ಕು ನೇರ ಬಾದಾಮಿ ಗಿಡ ಕಾರಣ ಅನ್ನೋ ಸುದ್ದಿಯನ್ನ ಮತ್ತು ಭಯವನ್ನ ಜನರ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿ ಕೊನೆಗೂ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಗಿಡ ಕಡೆಸುವಲ್ಲಿ ಸಫಲವಾಗ್ತಾನೆ ಆ ಗಿಡ ಕಡಿದಾರೆಂಬೂದು ತಿಳಿದಾಕ್ಷಣದಿಂದ ಅದರ ಮಾಲಿಕ ಮಾನಸಿಕ ಸ್ಥಿಮಿತ 
ಕಳೆದುಕೊಂಡು ಹಗಲು ರಾತ್ರಿ ಎನ್ನದೆ ಹುಚ್ಚನಂತೆ ಹಲಬುತ್ತಾ ಕಂಡ ಕಂಡವರಿಗೆ ಬೈಯುತ್ತಾ ಕೊನೆಗೊಂದು ರಾತ್ರಿ ಗುಬ್ಬಿ ಆಯಿ ಮಲಗಿದ್ದಾಗ ಗಿಡದ ಮಾಲಿಕ್ ಹೊರಗಿಂದ ಚಿಲಕ ಹಾಕಿ ಆ ಬಾದಾಮಿ ಗಿಡದ ಕಟ್ಟಿಗೆಗಳಿಗೆ ಬೆಂಕಿ ಹಾಕಿ ನೇರವಾಗಿ ಅಗ್ನಿಗಾಹುತಿ ಆಗ್ತಾನೆ (ಒಂದು ಗಿಡಕ್ಕು ಇಷ್ಟೊಂದು ಪ್ರೀತಿಯಿಂದ ಸಾಕಿ ಅದರೊಟ್ಟಿಗೆ ಮಗನ/ಳ ಹಾಗೆ ಭಾವನಾತ್ಮಕ ಸಂಬಂಧ ಬೆಳೆಯುತ್ತೆ ಅನ್ನೋದು ಮೊದಲು ಓದಿದ್ದು)
ಇದು ಹಾಣಾದಿಯುದ್ದಕ್ಕು ನಿರೂಪಕನ ತಂದೆಯ ದುರಂತ ಅಂತ್ಯದ ಬಗ್ಗೆ ವಿವರಿಸುತ್ತಾ ಸಾಗುವ ಅಜ್ಜಿ ಈ ಹುಡುಗನಿಗೆ ತಾನೊಂದು ಆತ್ಮ ಅನ್ನೋದು ತಿಳಿಯೋದಕ್ಕೆ ಅವಕಾಶ ಕೊಡದಂತೆ ನಡೆಸಿಕೊಂಡು ಬಂದು ಕೊನೆಗೆ ಅವನ ತಂದೆಯನ್ನ ಹೂತು ಹಾಕಿದ ಹೊಲದ ಹತ್ರ ಬಿಟ್ಟು ತಾನೂ ಹೊಟ್ಟೆಪಾಡಿಗೆ ಮಾಡುವ ಕೆಲಸ ಕಾಯಿಗಳನ್ನ ಹಸನು ಮಾಡಿಸುವ ಹೆಣ್ಣು ಮಗಳತ್ರ ಹೋಗಿ ಬರುವುದಾಗಿ ಹೇಳಿ ಹೋದಾಗ ಭಯದಲ್ಲೆ ತನ್ನ ತಂದೆಯನ್ನ ಹೂತ ಜಾಗಕ್ಕೆ ಬಂದು ಒಂದು ಋಣಾತ್ಮಕ ಭಾವಕ್ಕೆ ವಶವಾಗಿ ಸ್ತಬ್ದವಾಗಿ ನಿಂತಾಗ ಬೆಳಗಿನ ಮೂರನೆಯ ಜಾವದ ಆರಂಭ ಪಕ್ಕದ ಗಿಡಗಂಟಿಗಳಿರೋ ಜಾಗದಲ್ಲಿ ಒಂದು ಸಣ್ಣ ಬೆಂಕಿಯ ಕಿಡಿ ಕಾಣಿಸಿ ಅದರೊಟ್ಟಿಗೆ ಮುಂದಕ್ಕೆ ಹೆಜ್ಜೆ ಹಾಕುತ್ತಾ ಬರುವ ಆಕೃತಿಯನ್ನ ಬೆಚ್ಚಿ ನೋಡುವ ನಿರೂಪಕ ಅವನು ಬಂದು ಮಾತಾಡಿಸಿ ತಾನು ನಿಮ್ಮ ತಂದೆಯವರ ಆಳು ಕಂಠಿಯ ಮಗ ಎಂದಾಗ ಕತೆಗಾರ ಇಲ್ಲಿತನ ನಡೆದ ಘಟನೆ ವಿವರಿಸಿದಾಗ ಕಂಠಿಯ ಮಗ ಬೆಚ್ಚಿ ಬೆವತು ಹೋಗುವಂತಹ ಸತ್ಯವನ್ನ ಹೇಳ್ತಾನೆ ಅಸಲಿಗೆ ಈ  ಗುಬ್ಬಿ ಅಜ್ಜಿ ಯಾರು ಆಕೆ ಸತ್ತು ಎಷ್ಟು ವರ್ಷ ಆಯ್ತು ಆ ಚಿಕ್ಕ ಹುಡುಗಿ ಯಾರು ಆಕೆ ಬದುಕಿದ್ದಾಳ ಅನ್ನೋದೆಲ್ಲಾ ಗೊತ್ತಾಗಕ್ಕೆ ಮುರಾನೆಯ ಚುಮು ಚುಮು ಚಳಿಯ ಜಾವ ಸಾಕ್ಷಿಯಾಗಿರುತ್ತದೆ.
ಅಸಲಿಗೆ ಗುಬ್ಬಿ ಆಯಿ‌ ಒಂದು ಆತ್ಮ ಆ ಮನೆಯಲ್ಲಿ ಇರೋ ಸಣ್ಣ ಹುಡುಗಿ ಸಹ ಆತ್ಮ ಇಲ್ಲಿ ಒಂಥರಾ ನಿರೂಪಕನಿಗೆ ಭ್ರಾಮಕ‌ ಲೋಕದಲ್ಲಿ ಅಲೆಸುತ್ತಾ ಅವನ ತಂದೆಯ ಬದುಕಿನ ಕಡು ಸತ್ಯ ಅರುಹಿ ಮರೆಯಾದ ಅಜ್ಜಿ.ಎಲ್ಲವೂ ಆತ್ಮಕತೆ ಇನ್ನಿತರೆ ಕತೆಗಳಾದರೆ ಇಲ್ಲಿ ಆತ್ಮಗಳೆ ಕತೆಗೆ ಕಥಾವಸ್ತು ಮತ್ತು ಕತೆಯ ಮುಖ್ಯ ಪಾತ್ರಗಳು ಹಾಗೂ ಕತೆಯೊಳಗಿನ ಕತೆಗಳನ್ನ ಸಮಯೋಚಿತವಾಗಿ ವಿವರಿಸುತ್ತಾ ಸಾಗುವ ನಿರೂಪಕ.

ಓದಿದಾಗ ಕೆಲವೊಂದು ಅಂಶಗಳು ಹೀಗೂ ಇರುತ್ತೆ ಅನ್ನುವಂತೆ ಮನಗಂಡು ಬಿಟ್ಟಿದ್ದಿನಿ.

೦೧)ಜನರು ಒಬ್ಬ ಮನುಷ್ಯನಿಗೆ ಮತ್ತು ಗಿಡ ಮರ ಪಕ್ಷಿ ಪ್ರಾಣಿಗಳೊಂದಿಗೆ ಇರುವ ಗಾಢ ಮುಗ್ಧ ಪ್ರೀತಿಯನ್ನ ಅರ್ಥ ಮಾಡಿಕೊಳ್ಳದೆ ಭ್ರಮನಿರಶನಕ್ಕೆ ಒಳಗಾಗಿ ಹೃದಯಹೀನರಂತೆ ವರ್ತಿಸೋದು.

೦೨)ಒಂದು ಮರದೊಂದಿಗೆ ಅಥವಾ ಇತರೆ ಸಜೀವ ನಿರ್ಜೀವ ವಸ್ತುಗಳು ಮನುಷ್ಯನ ಭಾವನಾತ್ಮಕ ವಿಚಾರಗಳಿಗೆ ಎಷ್ಟು ಹತ್ತಿರವಾಗಿರುತ್ತವೆ ಹಾಗೆ ಅದನ್ನ ದೂರದಾಗ ಅದರಿಂದ ಆತನ ಮೇಲೆ ಯಾವ ತರದ ಪರಿಣಾಮ ಬೀರುತ್ತೆ ಅನ್ನೋದು ಕಾದಂಬರಿ ಸಾಕ್ಷಿಕರಿಸುತ್ತದೆ.

೦೩)ಗಿಡದಿಂದ ಹೀಗೂ ಆಗುತ್ತಾ ಅನ್ನೋದು ತರ್ಕಿಸದೆ ಮೂಲ ಕಾರಣಕ್ಕೆ ಹುಡಕಾಡದೆ ಕಾಕತಾಳೀಯ ಎಂಬಂತೆ ಎಲ್ಲವೂ ನಡೆದಂತೆ ನಡೆದದ್ದು ಒಪ್ಪಿಕೊಂಡು ಒಬ್ಬರ ಮೇಲೆ ಹೀಗೆಲ್ಲಾ ಜನ ಮುಗಿಬಿದ್ದು ಹಿಂಸೆ ಕೊಡ್ತಾರೆ ಅನ್ನೋದು ಸಹ ಇಲ್ಲಿದೆ.

೦೪)ಬಾದಾಮಿ ಗಿಡಕ್ಕೆ ನೇತು ಬಿದ್ದ ಕಾಕತಾಳೀಯ ಕತೆಗಳಿಗೆ ಒಂದಿನ ಗಿಡವೆ ಹೇಗೆ ಬಲಿಯಾಯ್ತೋ ಗಿಡದ ಮಾಲಿಕನ ಶಾಪಕ್ಕೋ ಅಥವಾ ಇನ್ಯಾವುದೋ ಕಾಕತಾಳೀಯ ಕತೆಗೆ ಊರ ಜನರ ಮನೆ ಆಸ್ತಿಪಾಸ್ತಿ ನೆಮ್ಮದಿ ಇದ್ದದ್ದು ಎಲ್ಲಾ ಬಲಿಯಾಯ್ತು.


ಒಬ್ಬ ಬರಹಗಾರ ಹೇಗೆ ಕಾವ್ಯಲೋಕಕ್ಕೆ ಅಂಬೆಗಾಲಿಟ್ಟು ಬಂದು ಒಂದು ಇಲ್ಲಿ ಗಮ್ಯ ಕಂಡುಕೊಂಡು ತನ್ನ ಗಟ್ಟಿಯಾದ ಬರಹಗಳ ಮೂಲಕ‌ ಜನಮಾನಸದಲ್ಲಿ ಖಾಯಂ ಆಗಿ ನಿಲ್ಲುತ್ತಾನೋ ಹಾಗೇಯೇ ಈ ಕಾದಂಬರಿಯಲ್ಲಿ ಬಾಲ್ಯದ ನೆನಪುಗಳು ಮೆಲಕು ಹಾಕುವ ಮೂಲಕ ಶುರುವಾದ ಕತೆ ತನ್ನೂರಿಗೆ ಬಂದು ನಡೆಯೋದು ಕಲಿತು ಯಾವುದೆ ಗೊಂದಲ ಆಭಾಸ ಎನಿಸಿದರೆ ಓದಿಸಿಕೊಂಡು ಸಾಗುತ್ತದೆ.ಕತೆಗಾರ ಹೊಸಬರಾದರು ಕತೆ ಪೂರ್ಣತೆ ಕಂಡುಕೊಂಡಿದೆ ನಮ್ಮ ಭಾಗದ ಭಾಷೆಯ ಸಮಯೋಚಿತ ಸಮರ್ಪಕವಾದ ಬಳಕೆ ಮತ್ತು ಅಚ್ಚುಕಟ್ಟಾದ ಪಾತ್ರಗಳನ್ನ ಕತೆಯುದ್ದಕ್ಕು ನಿಭಾಯಿಸುತ್ತಾ ಅಲ್ಲಲಿ ಕೆಲವು ಉಪಮೇಗಳು ಹಿರಿಯರ ಮಾತಿನಂತೆ ನೆನಪಲ್ಲಿ ಉಳಿತವೆ.ಮೂಲಕ ಗದ್ಯಕೃತ್ರುಗಳ ಸಾಲಿಗೆ ಸೇರುವು ಯಾವುದೆ ಅನುಮಾನವಿಲ್ಲ.ಅಭಿನಂದನೆಗಳು ಕಪೀಲ್ ಬ್ರದರ್ ಇನ್ನು ಹೆಚ್ಚಿನ ಕಾದಂಬರಿಗಳು ನಿಮ್ಮಿಂದ ಹೊರಬಂದು ನಾಡಿನ ಜನರ ಮನದಲ್ಲಿ ಅಚ್ಚಳಿಯದೆ ಉಳಿಯಲಿ ಎಂದು ಶುಭಹಾರೈಸುತ್ತೆನೆ.ಹಾಗೇಯೆ ಇದರಲ್ಲಿ ಆದ ಕೆಲವೂ ಸಣ್ಣ ತಪ್ಪುಗಳು ಸಹ ಫೋನಲ್ಲಿ ಚರ್ಚೆ ಮಾಡಲಾಗಿದೆ ನಿಮ್ಮೊಟ್ಟಿಗೆ..

ತಿಳಿದ ರೀತಿ ಬರೆಯುವ ಪ್ರಯತ್ನ ಮಾಡಿದ್ದಿನಿ ಧನ್ಯವಾದಗಳು "ಹಾಣದಿ" ಕೈಗೆತ್ತಿ ಒಂದೆ ಗುಕ್ಕಿಗೆ ಓದಿಸಿದಕ್ಕೆ
✍🏻✍🏻✍🏻✍🏻
*ರಾಜೇಶ ಶಿಂಧೆ*

Saturday 25 August 2018

ಪಿ.ಕೆ ನವಲಗುಂದರವರ ಕವನ

ತಾತ್ಕಾಲಿಕ ಪ್ರೇಯಸಿ

ಹೈಸ್ಕೂಲ್ ಡೇ ನಿಂದ ಕಾಲೇಜಿಗೆ ಶಿಪ್ಟಾದ
ಕಲರ್ ಪುಲ್ ಡ್ರೆಸ್ಗಳೊಂದಿಗೆ
ಕನಸುಗಳನ್ನು ಮಾರಲಾಗುತ್ತದೆ ?
ಕೂದಲು ತೊಯ್ದು ತೊಟ್ಟಿಕ್ಕುವ ಇಬ್ಬನಿ
ವರ್ಣಿಸುವ ಬಿ ಎ ಕಾಲೇಜಿನ ಲೆಕ್ಚರರ್ನ
ಪಾಠ ,
ಪಾರ್ಕಿನಲ್ಲಿನ ಚುಕ್ಕಿ ಉಸಿರು,
ಸೀಗರೇಟ್ ಅಡ್ಡಾಗಳಲ್ಲಿ "ಆಪರೇಷನ್ ಲವ್"
ಹಾಗೂ ಕ್ರಾಂತಿ ಮಾತಗಳು

ಮಣ್ಣು ತೊಟ್ಟಿಲಲ್ಲಿ ಮಲಗಿದ್ದ ಮಗುವಿಗೆ
ಮೊಬೈಲ್ ಹಿಡಿದು ರೊಮ್ಯಾಂಟಿಕ್ ಕಾವ್ಯ
ಒತ್ತಿ ಒತ್ತಿ ಹೇಳುವಾಗ ಕಂದನ ಕೈಕಾಲು
ಬಡೆದಾಡುತ್ತವೆ
ಬೈಪಾಸ್ ರಸ್ತೆಯ ತಿರುವಿನ ಪಾನೀಪುರಿ
ಅಂಗಡಿ ಮೋಟ ಹುಡಗ ಇತ್ತೀಚೆಗಷ್ಟೆ
ಸುಮ್ಮನೆ ನಗುತ್ತಿದ್ದ
ಆ ಹುಡುಗಿ ತಾತ್ಕಾಲಿಕ ನಗು ಕಾರಣ !
ಹಸಿದ ಹೊಟ್ಟಿ ತಣ್ಣಗಾಗಿರಬಹದು !

ಮಧ್ಯರಾತ್ರಿ ಬೆಣಚು ಕಲ್ಲುಗಳ ಮೇಲೆ
ಹೆಸರು ಕೆತ್ತುವ ಖಯಾಲಿ
"ಹೇ" ಯಾರದು ಈ ರಾತ್ರಿ
ಹಳದಿ ಕಾಯಿಲೆ ಹೂವಿನ ಶವಕ್ಕೆ 
ಅತ್ತರ ಸಿಂಪರಿಸುವವರು
ಸ್ಮಶಾನದ ನಟ್ಟನಡುವಿನ
ಅಸ್ತಿತ್ವದ ಗೈರಾಗಬಹದು
ಕಂಬನಿ ತುಟಿಗಳ ಮಧ್ಯ ನಡಗುವ ರಾತ್ರಿಗಳ
ನೀರವತೆ "ಛೇ" ಈ ಒಣ ಹವೆಯಲ್ಲಿ
ತಾತ್ಕಾಲಿಕ ಪ್ರೇಯಸಿ ನೆನಪು

ಒಂದೇ ನೋಟ್ ಬುಕ್ನ್ ಎರಡು ಕಥೆ
ಬೆರಳ ತುದಿ ಚಿತ್ರಿಸುವ  ಹಳೆ ಹಾರ್ಟ್ ಸಿಂಬಾಲ್
ಅತ್ತು ಬೆತ್ತಲಾಗುವ ಎಷ್ಟೋ ಲಾಸ್ಟ್ ಬೆಂಚ್
ಲವ್ ಸ್ಟೋರಿಗಳು ಕೊನೆಗೊಮ್ಮೆ
"ಪ್ರೀತಿ ಬಾರ್"ನ್ ತಳ ತುಂಬಿಕೊಳುತ್ತವೆ

#ಪಿ ಕೆ...?