Thursday 20 July 2017

ಕಾವ್ಯ ಕವನ...

ಗುಂಡು ಸಿಡಿವ ಬಂದೂಕಿನಲಿ ಪಾರಿವಾಳ ಗೂಡು ಕಟ್ಟಬಾರದೇ ಎಂದು ಸೈನಿಕನ ಮುದ್ದು ಮಗು ಪ್ರಾರ್ಥಿಸಿತ್ತು.....  ಪುಟ್ಟ ಕಂಗಳಿಂದ ಉದುರಿದ ಹನಿ ತಂಗಾಳಿಯನೂ ಬಿಸಿಯಾಗಿಸಿತ್ತು .
ಇರಿದ ಚೂರಿಯ ಮೇಲಿನ ರಕ್ತದ ಕಲೆಯಲಿ ಬುದ್ದನ ನಗುವಿತ್ತು.  ಅಳಿಸಿದ ಪುಟ್ಟ ವಿಧವೆಯ ಕುಂಕುಮದಂತೆ ಬಿಳಿಯ ರೆಕ್ಕೆಗಳೂ ಈಗ ಕೆಂಪು ಕೆಂಪು ......

ಮುಗಿಲಲಿ ಮಲಗಿದ್ದ ಚಂದಿರನ ಮೌನ ಮುಗುಳು  , ಹಾಲು ಗಲ್ಲದ ಕಂದನ ಅಳು ಇಮ್ಮಡಿಸಿತ್ತು.
ತೋಳಜೋಲಿಯಲಿ ತೂಗಿ  ಮಲಗಿಸುತಿದ್ದ ಅಪ್ಪನಿಗೀಗ ಕೈಗಳಿಲ್ಲ‌. ಬುದ್ಧನ ನಗುವಿಗೂ ಈಗೀಗ ಮೆತ್ತಿದಂತಿದೆ ಸಾವಿನ ಕಮಟು...

ಜಂಗುಳಿಯೊಳಗೆ  ಅಮ್ಮ ಸಿಕ್ಕದೆ ಅಲೆದಾಡಿದ ಮಗು , ರಕ್ತ ಸಿಕ್ತ ದೇಹ , ಚೆಲ್ಲಾಪಿಲ್ಲಿ  ದೇಹಗಳ ನೋಡಿ  ಬೆಚ್ಚಿ ಬಿದ್ದಿದೆ . ಎಲ್ಲಿಯದೋ ಅಳು .‌
ಅದು  ಉಗ್ರನ ಎದೆಯೊಳಗಿನ
ಸತ್ತ ಮಾನವೀಯತೆಯದು ಅಂತ
ಅದಕಿನ್ನು  ಗೊತ್ತಿಲ್ಲ .

ಪೈನ್ ಮರದ ಎಲೆ ಕಚ್ಚಿಕೊಂಡು ಹಾರುತಿರುವ ಹಕ್ಕಿಯಾದರೂ ತನ್ನ ಉಳಿಸಬಹುದಿತ್ತೆಂದು
ಸಹಸ್ರ ಆಯ್ಲಾನ್‌‌ರು  ಮುಗ್ಧವಾಗಿ ಬೆದರಿದ ಕಣ್ಣಿಂದ ನೋಡುತ್ತಲೇ ಇದ್ದಾರೆ .
ಕಟುಕ ಸಮುದ್ರ ಅವರನ್ನ ಮತ್ತೆ ಮತ್ತೆ ದಡಕೆ ತಂದು ಹಾಕುತ್ತಲೇ ಇದೆ ...

~ ಕಾವ್ಯ ಎಸ್ ಕೋಳಿವಾಡ

No comments:

Post a Comment